ನವದೆಹಲಿ: ಕೊರೊನಾ ಭಾರತವನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಕೊರೊನಾ ಸಂಕಷ್ಟದ ಮಧ್ಯೆಯೂ ಸಂಸತ್ ಅಧಿವೇಶನ ನಡೆಸಲು ಭರ್ಜರಿ ತಯಾರಿ ನಡೆಯುತ್ತಿದೆ. ಕೊರೊನಾ ಸಂಕಷ್ಟ ಎದುರಾದ ಬಳಿಕ ಇದೇ ಮೊದಲ ಬಾರಿಗೆ ಸಂಸತ್ ಕಲಾಪ ನಡೆಸಲು ಸಿದ್ಧತೆಗಳು ಅಂತಿಮ ಹಂತಕ್ಕೆ ಬಂದಿವೆ.
ಕೊರೊನಾ ಸೇರಿದಂತೆ ದೇಶದ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಮುಂಗಾರು ಸಂಸತ್ ಅಧಿವೇಶನ ಆರಂಭಿಸುವಂತೆ ವಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಒತ್ತಾಯ ಮೇರೆಗೆ ಕೊರೊನಾ ಸಂಕಷ್ಟದ ನಡುವೆ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಅಧಿವೇಶನ ಅಧಿಕೃತ ದಿನಾಂಕ ಕೂಡಾ ಪ್ರಕಟವಾಗಲಿದ್ದು, ಅಧಿವೇಶನಕ್ಕೆ ಸಂಸತ್ ಸಿದ್ಧವಾಗುತ್ತಿದ್ದು ಹಲವು ವಿಶೇಷತೆಗಳು ಒಳಗೊಂಡಿರಲಿದೆ.
ಈ ಬಾರಿ ಸಂಸತ್ ಅಧಿವೇಶನದ ವಿಶೇಷತೆಗಳು
* ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಕ್ಕಾಗಿ ಸದನದ ಗ್ಯಾಲರಿ ಹಾಗೂ ಚೇಂಬರ್ ಗಳನ್ನು ಕೂಡ ಬಳಸಲಾಗುತ್ತಿದೆ.
* ಸದಸ್ಯರಿಗಾಗಿ ಎರಡೂ ಕಡೆಗಳಲ್ಲಿ 85 ಅಂಗುಲದ ದೊಡ್ಡ ಪರದೆಗಳನ್ನು ಅಳವಡಿಸಲಾಗುತ್ತಿದೆ.
* ವೈರಸ್ ಹಾಗೂ ಇತರ ಸೋಂಕು ನಿವಾರಣೆಗಾಗಿ ಏರ್ ಕಂಡೀಷನರ್ ಗಳಲ್ಲಿ ನೇರಳಾತೀತ ವಿಕಿರಣಗಳನ್ನು ಬಳಸಲಾಗುತ್ತಿದೆ.
* ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ.
* ಪಕ್ಷಗಳ ಸಂಖ್ಯಾಬಲ ಆಧರಿಸಿ ಗ್ಯಾಲರಿ ಅಥವಾ ಚೇಂಬರ್ ಗಳಲ್ಲಿ ಆಸನ ವ್ಯವಸ್ಥೆ
* ಪ್ರಧಾನಮಂತ್ರಿ, ಕೇಂದ್ರ ಸಚಿವರು, ಸಭಾ ನಾಯಕರು, ವಿಪಕ್ಷಗಳ ನಾಯಕರಿಗೆ ರಾಜ್ಯಸಭೆಯ ಚೇಂಬರ್ ನಲ್ಲಿ ಅವಕಾಶ
* ಮಾಜಿ ಪ್ರಧಾನಿಗಳಾದ ಮನ್ನೋಹನ್ಸಿಂಗ್ ಹಾಗೂ ಎಚ್.ಡಿ. ದೇವೇಗೌಡ ಅವರಿಗೂ ಚೇಂಬರ್ ನಲ್ಲಿಯೇ ಆಸನ ವ್ಯವಸ್ಥೆ
ಈ ಬಾರಿ ಕಲಾಪಗಳು ನಿರ್ದಿಷ್ಟವಾಧಿಗೆ ನಡೆಯದೇ ಕೇವಲ ನಾಲ್ಕು ಗಂಟೆಗಷ್ಟೇ ಸೀಮಿತವಾಗಲಿದೆ. ಮೊದಲು ಲೋಕಸಭೆ ಕಲಾಪ ಆರಂಭವಾದರೆ, ನಂತರ ರಾಜ್ಯಸಭೆ ಕಲಾಪಕ್ಕೆ ಚಾಲನೆ ಸಿಗಲಿದೆ. ಅಧಿಕಾರಿಗಳ ಗ್ಯಾಲರಿ ಹಾಗೂ ಪ್ರೆಸ್ ಗ್ಯಾಲರಿಯಲ್ಲೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ 15 ಜನರಿಗಷ್ಟೇ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಮಾರ್ಚ್ 23 ರಂದು ಬಜೆಟ್ ಅಧೀವೇಶನ ಮುಕ್ತಾಯಗೊಂಡಿತ್ತು. ಇದಾದ ಆರು ತಿಂಗಳ ಒಳಗೆ ಮತ್ತೆ ಅಧಿವೇಶನ ನಡೆಸಲೇಬೇಕಾಗುತ್ತದೆ. ಈ ಕಾರಣದಿಂದಾಗಿ ಸೆ.23ರೊಳಗಾಗಿ ಕಲಾಪ ಆರಂಭಿಸಬೇಕಾದ ಅನಿವಾರ್ಯತೆ ಇದೆ.