– ಕೊರೊನಾ ಆಸ್ಪತ್ರೆಯಲ್ಲಿ ಗಣೇಶ ಚತುರ್ಥಿ ಆಚರಣೆ
ಉಡುಪಿ: ಕೊರೊನಾ ಪಾಸಿಟಿವ್ ರೋಗಿಗಳಿಗೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ ಹಬ್ಬದೂಟ ಬಡಿಸಲಾಗಿದೆ. ಸ್ವತಃ ತಾಲೂಕು ವೈದ್ಯಾಧಿಕಾರಿ ಡಾ.ನಾಗಭೂಷಣ್ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಗಣೇಶನ ಹಬ್ಬ ನಾಡಿನಾದ್ಯಂತ ಸರಳವಾಗಿ ಆಚರಿಸಲಾಗಿದೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಕೊರೊನಾ ಪಾಸಿಟಿವ್ ಬಂದವರಿಗೆ ಚೌತಿ ಆಚರಿಸುವ ಅವಕಾಶ ಸಿಗಲಿಲ್ಲ. ಉಡುಪಿಯ ಆರೋಗ್ಯ ಇಲಾಖೆ ಇಂದು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕುಂದಾಪುರದ ಕೋವಿಡ್ ಹೋಂ ಕೇರ್ ಸೆಂಟರ್ ನಲ್ಲಿ ಇಲಾಖೆಯಿಂದಲೇ ಸೋಂಕಿತರಿಗೆ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಲಾಗಿತ್ತು.
ದೈನಂದಿನ ಊಟಕ್ಕೆ ಬದಲಾಗಿ ಹಬ್ಬದ ಊಟದ ಪ್ಯಾಕೆಟ್ ಜೊತೆಗೆ ಸಿಹಿತಿಂಡಿಯನ್ನು ಕೂಡ ನೀಡಲಾಯಿತು. ತಾಲೂಕು ವೈದ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಅವರ ಈ ವಿಶೇಷ ಕಾಳಜಿಯ ಬಗ್ಗೆ ಸೋಂಕಿತರು ಮೆಚ್ಚುಗೆ ಮಾತನಾಡಿದ್ದಾರೆ. ಕೋವಿಡ್ ಸೋಂಕಿತರು ಬೇಸರದ ನೆಡುವೆ ನಕ್ಕಿದ್ದಾರೆ. ಮನೆಯಿಂದ, ಜನರ ಮನಸ್ಸಿಂದ ದೂರಾಗಿದ್ದೇವೆ ಎಂಬ ನೋವನ್ನು ಪಾಯಸದೂಟ ಮಾಡಿ ಕೆಲಕಾಲ ಮರೆತಿದ್ದಾರೆ.
ವೈದ್ಯಾಧಿಕಾರಿಗಳು ಕೂಡ ಹಬ್ಬವನ್ನು ರೋಗಿಗಳ ಜೊತೆ ಆಚರಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕಷ್ಟದಲ್ಲಿ ಇರುವವರಲ್ಲಿ, ನೋವಿನಲ್ಲಿರುವವರಲ್ಲಿ ನಗು ಮೂಡಿಸುವುದೇ ಒಂದು ಹಬ್ಬ. ನೆಮ್ಮದಿ ಕೊಡುವ ಕೆಲಸ ಮಾಡಿದ್ದೇನೆ ಎಂದರು.