– ಲಾಕ್ಡೌನ್ ವೇಳೆ ಹಲವು ಸೋಂಕಿತರಿಗೆ ಚಿಕಿತ್ಸೆ ನೀಡಿರುವ ವೈದ್ಯ
– ಚಿಕಿತ್ಸಾ ವೆಚ್ಚ ಭರಿಸಲಾಗಿದೆ ಸಂಕಷ್ಟ
ಬೆಂಗಳೂರು: ಕೊರೊನಾ ವಾರಿಯರ್ಸ್ಗೆ ಸೋಂಕಿನ ಕಾಟ ಶುರುವಾಗಿದ್ದು, ಮಹಾಮಾರಿ ಜೊತೆಗೆ ಇತರೆ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಇದೀಗ ವೈದ್ಯರೊಬ್ಬರಿಗೆ ಕೊರೊನಾ ಸೋಂಕಿನ ಜೊತೆಗೆ ಶ್ವಾಸಕೋಶ ಸಮಸ್ಯೆ ಸಹ ಎದುರಾಗಿದೆ.
ಇಷ್ಟು ದಿನ ಹಲವರನ್ನು ಕೊರೊನಾದಿಂದ ಕಾಪಾಡಿದ ಮೂತ್ರಪಿಂಡ ತಜ್ಞ ವೈದ್ಯ ಡಾ.ಬಾಲಾಜಿ ಪ್ರಸಾದ್ಗೆ ಕೊರೊನಾ ಸೋಂಕು ತಗುಲಿದ್ದು ಇದರ ಜೊತೆಗೆ ಶ್ವಾಸಕೋಶ ಸಮಸ್ಯೆ ಸಹ ಎದುರಾಗಿದೆ. ಹೀಗಾಗಿ ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವ ಉಳಿಸಿದ ವೈದ್ಯನಿಗೆ ಈಗ ಹಣದ ನೆರವಿನ ಅಗತ್ಯವಿದ್ದು, ನಿತ್ಯ ಚಿಕಿತ್ಸೆಗೆ ಲಕ್ಷ ರೂ. ಭರಿಸುತ್ತಿದ್ದಾರೆ. ಅಲ್ಲದೆ ಶ್ವಾಸಕೋಶ ಟ್ರಾನ್ಸ್ಫರ್ ಆಗಬೇಕಿದ್ದು, ಇದರ ವೆಚ್ಚವೇ ಬರೋಬ್ಬರಿ 1.20 ಕೋಟಿ ರೂ. ಆಗಿದೆ.
ಇಕೋಮೊ ಟ್ರಿಟ್ಮೆಂಟ್ ಹಾಗೂ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ 26 ದಿನಗಳಿಂದ ನಿರಂತರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮಕ್ಕಳು ಹಾಗೂ ಪತ್ನಿಗೆ ಇವರ ಚಿಕಿತ್ಸಾ ವೆಚ್ಚ ಭರಿಸುವುದು ದೊಡ್ಡ ಸವಾಲಾಗಿದೆ. ಲಾಕ್ಡೌನ್ ವೇಳೆ 100ಕ್ಕೂ ಹೆಚ್ಚು ಕೊರೊನಾ ಸೋಂಕಿತರಿಗೆ ವೈದ್ಯ ಚಿಕಿತ್ಸೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ಈಗ ಸಮಸ್ಯೆ ಎದುರಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ.