ಉಡುಪಿ: ಜಿಲ್ಲೆ ಕುಂದಾಪುರ ತಾಲೂಕಿನ ಸಲ್ವಾಡಿ ಎಂಬಲ್ಲಿ ಫಿನಾನ್ಶಿಯರ್ ಕೊಲೆಯಾಗಿದೆ. ತಡರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಅಜೇಂದ್ರ ಶೆಟ್ಟಿ (33) ಕೊಲೆಗೀಡಾದ ಫೈನಾನ್ಸ್ ಮಾಲೀಕ.
ಕುಂದಾಪುರದ ತಾಲೂಕಿನ ಕಂಡ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಳ್ವಾಡಿಯಲ್ಲಿ ತಡರಾತ್ರಿ ಡ್ರೀಮ್ ಫೈನಾನ್ಸ್ ನ ಫೈನಾನ್ಶಿಯರ್ ಕೊಲೆಯಾಗಿದೆ. ಯಡಾಡಿ ಮತ್ಯಾಡಿ ಕೂಡಲ್ ನಿವಾಸಿಯಾಗಿರುವ ಅಜೇಂದ್ರ ಶೆಟ್ಟಿ ತಡರಾತ್ರಿಯವರೆಗೆ ಮನೆಗೆ ವಾಪಾಸ್ಸಾಗಿರಲಿಲ್ಲ. ಮನೆಯವರು ಹುಡುಕಾಟ ಪ್ರಾರಂಭಿಸಿದರು. ಎಲ್ಲೂ ಕೂಡ ಕಾಣಿಸದಿದ್ದಾಗ ಆತನ ಸ್ನೇಹಿತರು ಫೈನಾನ್ಸ್ ಗೆ ಹೋಗಿದ್ದಾರೆ.
ಫೈನಾನ್ಸ್ ಒಳಗೆ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಅಜೇಂದ್ರ ಪತ್ತೆಯಾಗಿದ್ದಾರೆ ಎಂಬ ಮಾಹಿತಿಯಿದೆ. ಕಳೆದ ಏಳು ವರ್ಷಗಳಿಂದ ಸಳ್ವಾಡಿಯಲ್ಲಿ ಅಜೇಂದ್ರ ಫೈನಾನ್ಸ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ವ್ಯವಹಾರ ವಿಚಾರದಲ್ಲಿ ನಡೆದಿರುವ ಕೊಲೆಯೆಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಕೊಲೆಯ ಹಿಂದಿನ ಕಾರಣ ಪೊಲೀಸ್ ತನಿಖೆ ಯಿಂದ ಬೆಳಕಿಗೆ ಬರಬೇಕಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಸರಣಿ ಕಳ್ಳತನ – ಮೂರು ಮನೆಗೆ ಕನ್ನ ಹಾಕಿದ ಖದೀಮರು
ಉಡುಪಿ ಜಿಲ್ಲೆಯಾದ್ಯಂತ ಇತ್ತೀಚಿಗೆ ಒಂದಾದ ಮೇಲೆ ಒಂದು ಕೊಲೆ ಪ್ರಕರಣಗಳು ನಡೆಯುತ್ತಿದೆ. ಅಪರಾಧ ಕೃತ್ಯ ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆಮಾಡಿದೆ. ಕುಂದಾಪುರ ಗ್ರಾಮಾಂತರ ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಉಡುಪಿಯ ವಿಶಾಲಾ ಮರ್ಡರ್- ಯುಪಿಯಲ್ಲಿ ತಲೆಮರೆಸಿಕೊಂಡಿರುವ ಕಾಂಟ್ರ್ಯಾಕ್ಟ್ ಕಿಲ್ಲರ್