ಚಿಕ್ಕಬಳ್ಳಾಪುರ: ಕಾಂಗ್ರೆಸ್ ನಾಯಕರ ಪ್ರತಿಭಟನೆ ಬಯಲುನಾಟಕ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಬಣ್ಣಿಸಿದ್ದಾರೆ.
ರಾಜಭವನದ ಬಳಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಅವರು, ಯಾರಾದರೂ ಆಗಲಿ ಪ್ರತಿಭಟನೆ ಮಾಡಲು ನನ್ನ ವಿರೋಧವಿಲ್ಲ. ಕೋವಿಡ್-19 ಸಂಕಷ್ಟದ ಕಾಲದಲ್ಲಿ ಯಾವ ರೀತಿ ಪ್ರತಿಭಟನೆ ಮಾಡಬೇಕು? ಎಂಬ ಸ್ವಲ್ಪ ತಿಳುವಳಿಕೆಯೂ ಇಲ್ಲದಿದ್ದರೆ ಯಾವ ರೀತಿ ಕೋವಿಡ್-19 ನಿಗ್ರಹಕ್ಕೆ ಇಂತಹವರು ನಮಗೆ ಸಹಕರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಎಲ್ಲ ಕಡೆ ಇವರು ಮಾಡುತ್ತಿರುವುದು ಬಯಲು ನಾಟಕಗಳು, ಈ ಹಿಂದೆ ಬಯಲು ನಾಟಕ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಆಯಿತು. ಇದೀಗ ರಾಜಭವನದ ಮುಂದೆ ಬಯಲುನಾಟಕ ನಡೆಯುತ್ತಿದೆ ಎಂದರು.
ರಾಜಕಾರಣಿಗಳೇ ಸಾಮಾಜಿಕ ಅಂತರ ಕಾಪಾಡಲಿಲ್ಲವೆಂದರೆ, ಜನಸಾಮಾನ್ಯರು, ಮುಗ್ದರು ಯಾವ ರೀತಿ ಮಾರ್ಗಸೂಚಿ ಪಾಲನೆ ಮಾಡುತ್ತಾರೆ, ಇವರೇ ದೊಡ್ಡ ದೊಡ್ಡ ನಾಯಕರು ಮಂತ್ರಿಗಳಾದವರು. ಕೊರೊನಾ ಬಗ್ಗೆ ಇವರಿಗೆ ಕನಿಷ್ಠ ಪ್ರಜ್ಞೆ ಇಲ್ಲದೆ ಹೋದರೆ ಸಾಮಾನ್ಯ ಜನರ ಬಳಿ ಏನು ನೀರಿಕ್ಷೆ ಮಾಡುವುದು ಎಂದು ಕಿಡಿ ಕಾರಿದರು.