ಗದಗ: ಜಿಲ್ಲೆಯ ಶಿರಹಟ್ಟಿ ಪಟ್ಟಣ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಶರಣಪ್ಪ ಗೌಳಿ ಎಂಬಾತ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಶರಣಪ್ಪ ಗೌಳಿ ಆಸ್ತಿ ಖಾತಾ ಬದಲಾವಣೆ ಹಾಗೂ ಕಂಪ್ಯೂಟರ್ ಉತಾರ ನೀಡಲು ಫಲಾನುಭವಿಗೆ ಲಂಚದ ಬೇಡಿಕೆ ಇಟ್ಟಿದ್ದ. ಸ್ಥಳೀಯ ಮಹೇಶ್ ಎಂಬುವರು ತಮ್ಮ ಆಸ್ತಿಯ ಖಾತಾ ಬದಲಾವಣೆ ಮಾಡಿ ಕಂಪ್ಯೂಟರ್ ಉತಾರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ, ಉತಾರ ಒದಗಿಸಿರಲಿಲ್ಲ. ಉತಾರ ನೀಡಲು 3,500 ರೂಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ.
ಈ ಕುರಿತು ಅರ್ಜಿದಾರ ಮಹೇಶ್ ನೀಡಿರುವ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಇಂದು ಮಧ್ಯಾಹ್ನ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ದಾಳಿ ಮಾಡಿದ್ದಾರೆ. ಎಸಿಬಿ ಡಿ.ಎಸ್ಪಿ ವಾಸುದೇವರಾಮ್ ಎನ್ ಅವರ ನೇತೃತ್ವದ ತಂಡ ದಾಳಿಮಾಡಿ ಆರೋಪಿ ಶರಣಪ್ಪ ಗೌಳಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.