ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಮೀನುಗಾರರು ಎರಡು ದಿನಗಳ ಬಳಿಕ ಶವವಾಗಿ ಇಂದು ಪತ್ತೆಯಾಗಿದ್ದಾರೆ.
ಸಿದ್ದನಾಥ ಆರ್ಸಿಯ ಆಲಮಟ್ಟಿ ಡ್ಯಾಮ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ಪರಶುರಾಮ ಲಮಾಣಿ (36) ಮತ್ತು ರಮೇಶ ಲಮಾಣಿ (38) ಶವವಾಗಿ ಪತ್ತೆಯಾಗಿದ್ದಾರೆ.
ಗುರುವಾರ ಸಂಜೆ ತೆಪ್ಪದ ಮೂಲಕ ಮೂವರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಭಾರೀ ಮಳೆಗಾಳಿಗೆ ತೆಪ್ಪ ಮುಗುಚಿ ಬಿದ್ದಿದೆ. ಹೀಗಾಗಿ ಮೂವರ ಪೈಕಿ ಅಕ್ಷಯ ಲಮಾಣಿ ಎಂಬಾತ ಈಜಿ ದಡ ಸೇರಿದ್ದರು. ಆದರೆ ಉಳಿದ ಇಬ್ಬರೂ ಇನ್ನೂ ಪತ್ತೆಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಶೋಧ ನಡೆಸಲಾಗಿತ್ತು. ಆದರೆ ಪತ್ತೆಯಾಗಿರಲಿಲ್ಲ. ಆದರೆ ಎರಡು ದಿನಗಳ ನಂತರ ಪರಶುರಾಮ ಮತ್ತು ರಮೇಶ ಶವವಾಗಿ ನದಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.
ಈ ಕುರಿತು ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.