ಬೆಂಗಳೂರು: ಉದ್ಯಾನ ನಗರಿಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ.
ನಗರದ ಸದಾಶಿವನಗರ, ಮೇಕ್ರಿ ಸರ್ಕಲ್, ಸಂಜಯನಗರ, ಜೆ.ಸಿ.ನಗರ, ಆರ್.ಟಿ ನಗರ, ಯಶವಂತಪುರ, ನಂದಿನಿ ಲೇಔಟ್ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಒಂದೇ ಸಮನೆ ಸುರಿದ ಮಳೆಗೆ ದ್ವಿಚಕ್ರ ವಾಹನ ಸವಾರರು ಪರದಾಡಿದರೆ. ಹಲವೆಡೆ ಟ್ರಾಫಿಕ್ ಜಾಮ್ನಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಇನ್ನೂ ಹಲವೆಡೆ ರಸ್ತೆಗಳ ಅಂಡರ್ ಪಾಸ್ಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಹರಸಾಹಸಪಡುವಂತಾಯಿತು.
ಆರಂಬದಲ್ಲಿ ಜಿಟಿಜಿಟಿ ಮಳೆ ಶುರುವಾಗಿದ್ದು, ನಂತರ ವೇಗ ಪಡೆದುಕೊಂಡು ಅಬ್ಬರಿಸಿ ಬೊಬ್ಬಿರಿಯಿತು. ಇದರಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ ಸಂಭವಿಸಿತು. ಕೆಲ ಹೊತ್ತು ವಾಹನ ಸವಾರರು ಪರದಾಡುವಂತಾಯಿತು.
ಓಕಳಿಪುರಂ ಅಂಡರ್ ಪಾಸ್ ಬಳಿ ನಿಧಾನವಾಗಿ ನೀರು ಸಂಗ್ರವಾಗುತ್ತಿದ್ದು, ನೀರಿನಲ್ಲಿಯೇ ವಾಹನಗಳು ಸಂಚರಿಸುತ್ತಿವೆ. ಒಂದೆಡೆ ಮಳೆಯಲ್ಲಿ ನೆನೆಯುವ ಆತಂಕದಲ್ಲಿ ದ್ವಿಚಕ್ರ ವಾಹನ ಸವಾರರು ಸೇತುವೆ ಹಾಗೂ ಅಂಡರ್ ಪಾಸ್ ಕೆಳಗೆ ಆಶ್ರಯ ಪಡೆದರೆ, ಇನ್ನೂ ಹಲವೆಡೆ ಮಳೆಯಲ್ಲಿಯೇ ಜನ ಸಂಚರಿಸಿದರು. ಬೆಳಗ್ಗೆಯಿಂದ ಮೋಡವಿದ್ದರೂ ಮಳೆ ಸುರಿದಿರಲಿಲ್ಲ. ಇದೀಗ ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನ ಪರದಾಡುವಂತಾಯಿತು.