– ಸಾಗರದಲ್ಲಿ ವಿಶಿಷ್ಟ ಪ್ರಯೋಗ
ಶಿವಮೊಗ್ಗ: ಕೊರೊನಾ ಸೋಂಕಿತರು ಮಾನಸಿಕ ಖಿನ್ನತೆ ಹಾಗೂ ಒಂಟಿತನದಿಂದ ಹೊರ ಬರುವ ಸಲುವಾಗಿ ಶಿವಮೊಗ್ಗ ಜಿಲ್ಲೆ ಸಾಗರದ ಕೋವಿಡ್ ವಾರ್ಡಿನಲ್ಲಿ ಆರೋಗ್ಯ ಸಿಬ್ಬಂದಿ ಸೋಂಕಿತರಿಗಾಗಿ ಗ್ರಂಥಾಲಯ ತೆರೆದಿದ್ದಾರೆ.
ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹಲವು ಮಂದಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೊರೊನಾ ತುತ್ತಾಗಿ ಚಿಕಿತ್ಸೆ ಪಡೆಯಬೇಕಾದರೆ ತಮ್ಮವರಿಂದ ದೂರವಿದ್ದು ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇದೆ. ಹೀಗಾಗಿ ಸೋಂಕಿತರಿಗೆ ಒಂಟಿತನ ಕಾಡುತ್ತಿದೆ.
ಈ ಮಾನಸಿಕ ಖಿನ್ನತೆ ಹಾಗೂ ಒಂಟಿತನದಿಂದ ಸೋಂಕಿತರು ಹೊರ ಬರುವ ಸಲುವಾಗಿ ಗ್ರಂಥಾಲಯ ತೆರೆಯಲಾಗಿದೆ. ಈ ಗ್ರಂಥಾಲಯದಲ್ಲಿ ದಿನಪತ್ರಿಕೆಗಳು, ಮಾಸಿಕಗಳು ಜೊತೆಗೆ ದೊಡ್ಡ ದೊಡ್ಡ ಲೇಖಕರ ಜನಪ್ರಿಯ ಕಾದಂಬರಿಗಳನ್ನು ಸಹ ಇಡಲಾಗಿದೆ.
ಸದ್ಯ 500 ಪುಸ್ತಕಗಳನ್ನು ಕೋವಿಡ್ ವಾರ್ಡ್ ನಲ್ಲಿ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಖರೀದಿಸಲಾಗುವುದು ಎಂದಿದ್ದಾರೆ. ಜೊತೆಗೆ ಸಾಹಿತಿಗಳು ಹಾಗೂ ಲೇಖಕರು ಯಾರಾದರೂ ಉಚಿತವಾಗಿ ತಾವು ಬರೆದಿರುವ ಪುಸ್ತಕವನ್ನು ನೀಡುವುದಾದರೆ ನೀಡಬಹುದು ಎಂಬ ಮನವಿಯನ್ನು ಸಹ ಮಾಡಿದ್ದಾರೆ.
ಅಲ್ಲದೇ ರಾಜ್ಯದಲ್ಲಿಯೇ ಇದೇ ಪ್ರಥಮವಾದ ಕೋವಿಡ್ ವಾರ್ಡ್ ನಲ್ಲಿ ತೆರೆದಿರುವ ಗ್ರಂಥಾಲಯ ಇದಾಗಿದ್ದು, ಜಿಲ್ಲಾ ಕೇಂದ್ರದ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಸಹ ಗ್ರಂಥಾಲಯ ತೆರೆಯಲು ಆರೋಗ್ಯ ಸಿಬ್ಬಂದಿ ಚಿಂತನೆ ನಡೆಸಿದ್ದಾರೆ.