ಯಾದಗಿರಿ: ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ಯಾದಗಿರಿ ಪೊಲೀಸರು ವಿಭಿನ್ನ ಪ್ರಯತ್ನ ಮಾಡಿದ್ದು, ಆಟೋ ಚಾಲಕರನ್ನು ಠಾಣೆಗೆ ಕರೆಸಿ ಸನ್ಮಾನ ಮಾಡಿದ್ದಾರೆ. ಈ ಮೂಲಕ ವಿಭಿನ್ನವಾಗಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ.
ಇಷ್ಟು ದಿನ ಆಟೋಚಾಲಕರನ್ನು ಠಾಣೆಗೆ ಕರೆದು ಎಚ್ಚರಿಗೆ ನೀಡುತ್ತಿದ್ದ ಪೊಲೀಸರು, ಇಂದು ಠಾಣೆಗೆ ಕರೆದು ಸನ್ಮಾನಿಸಿ ರಸ್ತೆ ಮತ್ತು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವಂತೆ ಮನವಿ ಮಾಡಿದ್ದಾರೆ. ಯಾದಗಿರಿ ಡಿವೈಎಸ್ಪಿ ಸಂತೋಷ ಬನ್ನಹಟ್ಟಿ ಮತ್ತು ಟ್ರಾಫಿಕ್ ಪಿಎಸ್ಐ ಪ್ರದೀಪ್ ಬಿಸೆ, ಚಂದ್ರನಾಥ್ ನಗರದಲ್ಲಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಹೊಸ ಸಂಪ್ರದಾಯಕ್ಕೆ ಮುಂದಾಗಿದ್ದಾರೆ.
ಆಟೋ ಚಾಲಕರು, ವಾಹನ ಸವಾರರನ್ನು ಠಾಣೆಗೆ ಕರೆದು, ಸನ್ಮಾನ ಮಾಡಿ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಆಟೋ ಚಾಲಕರು ಸೇರಿದಂತೆ, ನಗರದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಸಂಚಾರಿ ಠಾಣಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಆಟೋಚಾಲಕರು ಮತ್ತು ಸಂಚಾರಿ ಠಾಣೆ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.