ಬೆಂಗಳೂರು: ಅಪಘಾತದ ನೆಪದಲ್ಲಿ ಉದ್ಯಮಿಯ ಬಳಿ ಬರೋಬ್ಬರಿ 45 ಲಕ್ಷ ದರೋಡೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಪುಲಿಕೇಶಿ ನಗರ ಪೊಲೀಸರು ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಉದ್ಯಮಿ ರಾಕೇಶ್ ಎಂಬವರ ಕಾರಿಗೆ ಬೈಕಿನಲ್ಲಿ ಬಂದ ಇಬ್ಬರು ಡಿಕ್ಕಿ ಹೊಡೆದಿದ್ದರು. ಇದೇ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದರು. ಈ ವೇಳೆ ಮತ್ತಿಬ್ಬರು ಆರೋಪಿಗಳು ಬಂದು ಉದ್ಯಮಿ ರಾಕೇಶ್ ಕಾರಿನಲ್ಲಿದ್ದ 45 ಲಕ್ಷಣ ಹಣ ದೋಚಿ ಎಸ್ಕೇಪ್ ಆಗಿದ್ದರು.
ಈ ಕುರಿತು ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಉದ್ಯಮಿಯ ಜೊತೆಗಿದ್ದ ವ್ಯಕ್ತಿಯೇ ದರೋಡೆಯ ಹಿಂದಿನ ಕಿಂಗ್ ಪಿನ್ ಅನ್ನೋದು ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಮಹಮ್ಮದ್ ಇರ್ಷಾದ್ ಕಳೆದ ಎಂಟು ವರ್ಷಗಳಿಂದ ಉದ್ಯಮಿಯ ಬಳಿ ಕೆಲಸ ಮಾಡಿಕೊಂಡಿದ್ದನು ಎಂದು ತಿಳಿದು ಬಂದಿದೆ.
ಉದ್ಯಮಿ ರಾಕೇಶ್ ಹಣದ ವ್ಯವಹಾರದ ಬಗ್ಗೆ ತಿಳಿದು ಅಪಘಾತದ ಪ್ಲಾನ್ ಮಾಡಿ ಹಣ ದೋಚಿದ್ದರು. ಇದೀಗ ಬಂಧಿತರಿಂದ ದರೋಡೆ ಮಾಡಿದ್ದ ಹಣ ಮತ್ತು ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.