– ಸೋಶಿಯಲ್ ಮೀಡಿಯಾದಲ್ಲಿ ಬ್ಯಾನರ್ ವೈರಲ್
ಬೆಂಗಳೂರು: ಆಂಜನೇಯನ ದೇಗುಲದ ಜೀರ್ಣೋದ್ದಾರಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬರು ಸುಮಾರು 1 ಕೋಟಿ ಬೆಲೆಬಾಳುವ ತನ್ನ ಭೂಮಿಯನ್ನು ದಾನ ಮಾಡಿದ್ದಾರೆ. ಸದ್ಯ ಇದರ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು. ನಗರದ ಕಾಡುಗೋಡಿ ಬೆಳತೂರು ಕಾಲನಿ ನಿವಾಸಿಯಾಗಿರುವ ಎಚ್.ಎಂ.ಜಿ ಬಾಷಾ ಅವರು ಈ ಮಹಾನ್ ಕಾರ್ಯ ಮಾಡಿದವರು. ಲಾರಿ ಉದ್ಯಮಿಯಾಗಿರುವ ಬಾಷಾ ಬೆಂಗಳೂರಿನಿಂದ 35 ಕಿ.ಮೀ ದೂರದಲ್ಲಿರುವ ಹೊಸಕೋಟೆ ತಾಲೂಕಿನ ವಾಲಗೇರಪುರದಲ್ಲಿರುವ ತಮ್ಮ 3 ಎಕರೆ ಭೂಮಿಯಲ್ಲಿ 1.5 ಗುಂಟೆ ಜಾಗವನ್ನು ಉಚಿತವಾಗಿಯೇ ಆಂಜನೇಯನ ದೇಗುಲಕ್ಕೆ ದಾನ ಮಾಡಿ ಸುದ್ದಿಯಾಗಿದ್ದಾರೆ.
ಈ ಸಂಬಂಧ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಬಾಷಾ, ಅಲ್ಲಿ ಒಂದು ಸಣ್ಣ ಹನುಮಾನ್ ದೇವಾಲಯವಿತ್ತು. ಹೀಗಾಗಿ ದೊಡ್ಡ ದೇಗುಲವನ್ನು ನಿರ್ಮಿಸಲು ಬಯಸಿದರೆ ನಾನು ಅವರಿಗೆ ಭೂಮಿಯನ್ನು ನೀಡಬಹುದು ಎಂದು ಕೆಲವರಲ್ಲಿ ಹೇಳಿದೆ. ಇತ್ತೀಚೆಗೆ ಟ್ರಸ್ಟ್ ಅವರು 1 ಗುಂಟೆ ಭೂಮಿಯನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲು ನನ್ನ ಬಳಿಗೆ ಬಂದರು. ಆಗ ನಾನು ಭೂಮಿ ನೀಡಲು ಸಿದ್ಧವಾಗಿರುವುದಾಗಿ ತಿಳಿಸಿದೆ. ಅಲ್ಲದೆ 1.5 ಗುಂಟೆ ಭೂಮಿಯ ಮಾಲಕತ್ವವನ್ನು ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಸೇವಾ ಟ್ರಸ್ಟ್ ಗೆ ವರ್ಗಾವಣೆ ಮಾಡಿರುವುದಾಗಿ ತಿಳಿಸಿದರು.
ಪೂಜಾ ಕಾರ್ಯಕ್ರಮಗಳು ಇದ್ದಂತಹ ಸಮಯದಲ್ಲಿ ದೇಗುಲದ ಆವರಣದಲ್ಲಿ ಜಾಗವಿಲ್ಲದೆ ಭಕ್ತರು ಪರದಾಡುತ್ತಿರುವುದನ್ನು ಬಾಷಾ ಗಮನಿಸಿದ್ದಾರೆ. ಈ ವಿಚಾರ ಅವರಿಗೆ ಭೂಮಿ ನೀಡಲು ಪ್ರೇರೇಪಿಸಿರುವುದಾಗಿ ಬಾಷಾ ಹೇಳಿದ್ದಾರೆ. ಸದ್ಯ ಸುಮಾರು 80 ಲಕ್ಷದಿಂದ 1 ಕೋಟಿವರೆಗೂ ಬೆಲೆಬಾಳುವ ಜಾಗವನ್ನು ಬಾಷಾ ಹಿಂದೂಗಳಿಗೆ ಹಸ್ತಾಂತರಿಸಿದ್ದಾರೆ.
ಬಾಷಾ ಅವರ ಈ ದಿಟ್ಟ ನಿರ್ಧಾರದಿಂದ ವಾಲಗೇರಪುರದ ಜನರಿಗೆ ಮೊದಲು ಶಾಕ್ ಜೊತೆ ಸಪ್ರೈಸ್ ಕೂಡ ಉಂಟುಮಾಡಿದೆ. ಈತ ಏನು ಮಾಡುತ್ತಿದ್ದಾನೆ ಎಂದು ಗ್ರಾಮದ ಜನ ಅನುಮಾನಪಟ್ಟರು. ಆದರೆ ಇಲ್ಲಿ ನಿರ್ಮಾಣವಾಗುವ ಹನುಮಾನ್ ದೇವಾಲಯವನ್ನು ನೋಡಲು ನಾನು ಕೂಡ ಇಷ್ಟಪಡುತ್ತೇನೆ ಎಂದು ಹೇಳಿರುವುದಾಗಿ ಬಾಷಾ ತಿಳಿಸಿದ್ದಾರೆ.
ಗ್ರಾಮದ ಜನರು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ವ್ಯತ್ಯಾಸವನ್ನು ನೋಡುವವರಲ್ಲ ಎಂದು ನಾನು ಭಾವಿಸುತ್ತೇನೆ. ನಾವೆಲ್ಲ ಒಂದೇ ಎಂಬುದನ್ನು ಅವರು ಪರಿಗಣಿಸುತ್ತಾರೆ. ಕೆಲ ರಾಜಕೀಯ ಮುಖಂಡರು ತಮ್ಮ ಸ್ವಂತ ಲಾಭಕ್ಕಾಗಿ ಮಾತನಾಡುವಾಗ ಜನರ ಧರ್ಮವನ್ನು ಎತ್ತಿ ತೋರಿಸುತ್ತಾರೆ. ಪ್ರಸ್ತುತ ಪೀಳಿಗೆ ಕೋಮುವಾದಿ ಮಾರ್ಗಗಳಲ್ಲಿ ಹೆಚ್ಚು ಯೋಚಿಸುತ್ತಿದೆ. ‘ಲವ್ ಜಿಹಾದ್’, ‘ಗೋಹತ್ಯಾ’ ಮುಂತಾದ ವಿಷಯಗಳ ಬಗ್ಗೆ ನಾವು ದಿನನಿತ್ಯ ಕೇಳುತ್ತೇವೆ. ದೇಶವು ಈ ರೀತಿಯಾದರೆ ಪ್ರಗತಿ ಹೊಂದುತ್ತದೆಯೇ? ನಾವು ಒಗ್ಗಟ್ಟಾಗಬೇಕು ಮತ್ತು ನಮ್ಮ ದೇಶದ ಬಗ್ಗೆ ನಮಗೆ ಪ್ರೀತಿ ಇರಬೇಕು ಎಂದು ಅವರು ವಿವರಿಸಿದ್ದಾರೆ.
ನನ್ನ ಈ ನಿರ್ಧಾರಕ್ಕೆ ಕುಟುಂಬ ಕೂಡ ಸಂಪೂರ್ಣ ಒಪ್ಪಿಗೆ ನೀಡಿದೆ. ಟ್ರಸ್ಟ್ ಸದ್ಯ ಸುಮಾರು 1 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಿದೆ ಎಂದರು. ಈ ಜಮೀನು ಓಲ್ಡ್ ಮದ್ರಾಸ್ ರಸ್ತೆಯ ಪಕ್ಕದಲ್ಲಿಯೇ ಹಾದುಹೋಗುವ ಹೆದ್ದಾರಿಯ ಸಮೀಪದಲ್ಲಿದೆ. ಬಾಷಾ ಅವರ ದೇಣಿಗೆಯನ್ನು ಶ್ಲಾಘಿಸುವ ಪೋಸ್ಟರ್ ಅನ್ನು ಸ್ಥಾಪಿಸಲಾಗಿದೆ. ಸದ್ಯ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಬಾಷಾ ಈ ದೃಢ ನಿರ್ಧಾರಕ್ಕೆ ಜನ ಬೇಷ್ ಎನ್ನುತ್ತಿದ್ದಾರೆ.