– ನಾಳೆ ಹುಟ್ಟೂರಿಗೆ ಮೃತದೇಹ ಆಗಮನ
ಹಾಸನ: ಕರ್ತವ್ಯದಲ್ಲಿರುವಾಗ ಅನಾರೋಗ್ಯದಿಂದ ಹಾಸನ ಜಿಲ್ಲೆಯ ಯೋಧ ಸಾವನ್ನಪ್ಪಿದ್ದಾರೆ.
ಅರಕಲಗೂಡು ತಾಲೂಕಿನ ಬಾಣದಹಳ್ಳಿ ಗ್ರಾಮದ ಬಿ.ಆರ್.ರಾಕೇಶ್ (22) ಮೃತ ಯೋಧ. ಅರಕಲಗೂಡು ಪ.ಪಂ.ನೌಕರರಾಗಿರುವ ಶಿವಮ್ಮ, ರಾಜು ದಂಪತಿ ಪುತ್ರ ರಾಕೇಶ್ ಹಾಸನದ ಎನ್.ಡಿ.ಆರ್.ಕೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗಲೇ ಭಾರತೀಯ ಸೇನೆ ಸೇರಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಬೆಳಗಾವಿ ಸೈನಿಕ ಶಾಲೆಯಲ್ಲಿ (2018) ಮಿಲಿಟರಿ ಸೇನೆ ತರಬೇತಿ ಪಡೆದು ಹಿಮಾಚಲ ಪ್ರದೇಶದಲ್ಲಿ ದೇಶ ಸೇವೆ ಸಲ್ಲಿಸುತ್ತಿದ್ದರು.
ಕಳೆದ ನಾಲ್ಕು ದಿನಗಳ ಹಿಂದೆ ಕರ್ತವ್ಯದಲ್ಲಿದ್ದಾಗಲೇ ಆರೋಗ್ಯ ಸಮಸ್ಯೆಯಿಂದ ಅಸ್ವಸ್ಥರಾಗಿದ್ದು, ಬಳಿಕ ಛತ್ತಿಸ್ಗಡದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯೋಧ ಇಂದು ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಸೇನಾಧಿಕಾರಿಗಳು ರಾಕೇಶ್ ಅನಾರೋಗ್ಯದ ಬಗ್ಗೆ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದು, ತಾಯಿ ಶಿವಮ್ಮ ಮತ್ತು ಸಹೋದರ ರಕ್ಷಿತ್ ಛತ್ತಿಸ್ಗಡ್ ಗೆ ತೆರಳಿದ್ದರು. ಯೋಧನ ಪಾರ್ಥೀವ ಶರೀರವು ನಾಳೆ ಹುಟ್ಟೂರಿಗೆ ಆಗಮಿಸಲಿದೆ ಎಂದು ಎಂದು ಕುಟುಂಬದ ಮೂಲಗಳು ತಿಳಿಸಿವೆ.