– ಡಾಕ್ಟರ್ ಆಗಿರುವ ನನ್ನ ಆದ್ಯ ಕರ್ತವ್ಯ ಎಂದ ಫವಾಜ್
ನವದೆಹಲಿ: ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಯೊಬ್ಬರಿಗೆ ತನ್ನದೇ ರಕ್ತ ನೀಡಿ ಜೀವ ಉಳಿಸುವ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಯ ಜೂನಿಯರ್ ಡಾಕ್ಟರ್ ಮಾನವೀಯತೆ ಮೆರೆದಿದ್ದಾರೆ. ಸದ್ಯ ವೈದ್ಯರಿಗೆ ಮೆಚ್ಚುಗೆಯ ಮಹಾಪೂರಗಳೇ ಹರಿದುಬರುತ್ತಿದೆ.
ಹೌದು. 24 ವರ್ಷದ ಮೊಹದ್ ಫವಾಜ್ ಮಾನವೀಯತೆ ಮೆರೆದ ಜೂನಿಯರ್ ಡಾಕ್ಟರ್. ವ್ಯಕ್ತಿಯೊಬ್ಬರು ಸೆಪ್ಟಿಕ್ ಶಾಕ್ ಅಥವಾ ವಿಷ ರಕ್ತ ಆಘಾತ(ರಕ್ತಕ್ಕೆ ಸಂಬಂಧಿಸಿದ ಒಂದು ಮಾರಣಾಂತಿಕ ಕಾಯಿಲೆ)ಯಿಂದ ಬಳಲುತ್ತಿದ್ದು, ಅವರಿಗೆ ಅರ್ಜೆಂಟಾಗಿ ಸರ್ಜರಿ ಆಗಬೇಕಾಗಿತ್ತು. ಆದರೆ ತಕ್ಷಣಕ್ಕೆ ರಕ್ತ ಲಭ್ಯವಿರಲಿಲ್ಲ. ಹೀಗಾಗಿ ಯೋಚನೆ ಮಾಡದೇ ತಾನೇ ರಕ್ತ ನೀಡಲು ಫವಾಜ್ ನಿರ್ಧರಿಸಿದ್ದಾರೆ.
ಈ ಸಂಬಂಧ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಫವಾಜ್, ಮಂಗಳವಾರ ರೋಗಿ ತನ್ನ ಪತ್ನಿಯೊಂದಿಗೆ ಆಸ್ಪತ್ರೆಗೆ ಬಂದರು. ಆತನ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ವಿಷ ರಕ್ತ ಕಾಯಿಲೆಗೆ ಒಳಗಾಗಿದ್ದನು ಎಂದರು.
ಅಲ್ಲದೆ ಅದಾಗಲೇ ಈ ಸೋಂಕು ವ್ಯಕ್ತಿಯ ಕಾಲು ಪೂರ್ತಿ ಹರಡಲು ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಅದಕ್ಕಾಗಿ ರಕ್ತದ ಅವಶ್ಯಕತೆ ಇತ್ತು. ಆದರೆ ರೋಗಿಯ ಸಂಬಂಧಿಕರು ಯಾರೂ ಆಸ್ಪತ್ರೆಗೆ ಬಂದಿರಲಿಲ್ಲ. ಪರಿಣಾಮ ವೈದ್ಯರು ತಾವೇ ರಕ್ತದ ವ್ಯವಸ್ಥೆ ಮಾಡಿಕೊಂಡರು.
ನಾನೊಬ್ಬ ವೈದ್ಯನಾಗಿ ನನ್ನ ಕೆಲಸ ಮಾಡಿದ್ದೇನೆ. ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದಾಗಿ ರಕ್ತದ ಕೊರತೆ ಇತ್ತು. ಆದರೆ ರೋಗಿಗೆ ತುರ್ತಾಗಿ ರಕ್ತ ಬೇಕಾಗಿತ್ತು. ಅಲ್ಲದೆ ರಕ್ತದ ವ್ಯವಸ್ಥೆ ಮಾಡಲು ರೋಗಿಯ ಕುಟುಂಬಸ್ಥರಿಗೆ ಸಮಯವೂ ಬೇಕಾಗಿತ್ತು. ಹಾಗಾಗಿ ತಾನು ರಕ್ತದಾನ ಮಾಡಲು ಹಾಗೂ ಬ್ಲಡ್ ಬ್ಯಾಂಕಿನಿಂದ ರಕ್ತದ ಘಟಕಗಳನ್ನು ಪಡೆಯಲು ನಿರ್ಧರಿಸಿದೆ ಎಂದು ಫವಾಜ್ ಹೇಳಿದ್ದಾರೆ.
ರೋಗಿ ಪತ್ನಿಯ ಸ್ಥಿತಿ ಕೂಡ ರಕ್ತದಾನ ಮಾಡುವಂತಿರಲಿಲ್ಲ. ಹೀಗಾಗಿ ಬೇರೆ ದಾರಿ ಇರಲಿಲ್ಲ ಎಂದು ಇದೇ ವೇಳೆ ವೈದ್ಯ ತಿಳಿಸಿದ್ದಾರೆ. ನಂತರ ಫವಾಜ್ ಸೇರಿದಂತೆ ವೈದ್ಯರ ತಂಡ ರೋಗಿಯ ಶಸ್ತ್ರಚಿಕಿತ್ಸೆ ನೆರವೇರಿಸಿದರು.