ಬೆಂಗಳೂರು: ಭಾನುವಾರದ ಲಾಕ್ಡೌನ್ ಈ ವಾರಕ್ಕೆ ಕೊನೆಯಾಗುತ್ತಾ ಎಂಬ ಪ್ರಶ್ನೆ ಈಗ ಎದ್ದಿದೆ.
ಜನರ ಓಡಾಟಕ್ಕೆ ಕಡಿವಾಣ ಹಾಕಿದಾಗ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ. ಭಾನುವಾರ ರಜೆ ಇರುವ ಜನರ ಓಡಾಟ ಜಾಸ್ತಿ. ಈ ಕಾರಣ ನೀಡಿ ಸರ್ಕಾರ ಭಾನುವಾರ ಬೆಂಗಳೂರು ನಗರವನ್ನು ಲಾಕ್ಡೌನ್ ಮಾಡಿದೆ. ಆದರೆ ಈ ಲಾಕ್ಡೌನ್ ನಿಂದ ಪ್ರಯೋಜನ ಏನು ಇಲ್ಲ. ಇದರಿಂದ ಆರ್ಥಿಕವಾಗಿ ಸರ್ಕಾರಕ್ಕೆ ಸಮಸ್ಯೆ. ಹೀಗಾಗಿ ಭಾನುವಾರ ಲಾಕ್ಡೌನ್ ಬೇಡ ಅಂತ ಕೆಲ ಸಚಿವರು ಸಿಎಂ ಯಡಿಯೂರಪ್ಪನವರಿಗೆ ಸಲಹೆ ನೀಡಿದ್ದಾರೆ.
ಲಾಕ್ಡೌನ್ ಬೇಕೇ? ಬೇಡವೇ ಎಂಬುದರ ಬಗ್ಗೆ ದೊಡ್ಡ ಮಟ್ಟದಲ್ಲಿ ಈಗ ಚರ್ಚೆಯಾಗುತ್ತಿದೆ. ಈ ನಡುವೆ ಕೇಂದ್ರ ಸರ್ಕಾರ ಮೂರನೇ ಅನ್ಲಾಕ್ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ. ಆಗಸ್ಟ್ ಮಾರ್ಗಸೂಚಿಯಲ್ಲಿ ಚಲನಚಿತ್ರ ಮಂದಿರಗಳು ತೆರೆಯಲು ಅನುಮತಿ ನೀಡುವ ಸಾಧ್ಯತೆಯಿದೆ ಎಂಬ ಚರ್ಚೆ ಆರಂಭವಾಗಿದೆ. ಒಂದು ಸೀಟ್ ಬಿಟ್ಟ ಇನ್ನೊಂದು ಸೀಟ್ ಗಳಲ್ಲಿ ಕುಳಿತುಕೊಂಡು ಸಿನಿಮಾ ವೀಕ್ಷಿಸಲು ಅನುಮತಿ ನೀಡಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಎಂಎಲ್ಎ ಚಾಲಕನ ಅವಾಂತರ- ಕುಡಿದು ವಾಹನ ಚಲಾಯಿಸಿ ಬೈಕ್ಗೆ ಗುದ್ದಿದ
ಶನಿವಾರ ಮತ್ತು ಭಾನುವಾರ ಚಲನಚಿತ್ರ ಮಂದಿರಗಳಲ್ಲಿ ಹೆಚ್ಚು ಕಲೆಕ್ಷನ್ ಆಗುತ್ತದೆ. ಹೀಗಿರುವಾಗ ಭಾನುವಾರ ಲಾಕ್ಡೌನ್ ಮಾಡಿದರೆ ಅವರಿಗೆ ನಷ್ಟ ಗ್ಯಾರಂಟಿ. ಈ ಎಲ್ಲ ಕಾರಣಕ್ಕಾಗಿ ಮುಂದಿನ ಭಾನುವಾರ ಲಾಕ್ಡೌನ್ ಇರುತ್ತದೋ ಇಲ್ಲವೋ ಎನ್ನುವುದು ಈ ವಾರವೇ ಸ್ಪಷ್ಟವಾಗಲಿದೆ.