ಮಡಿಕೇರಿ: ಏಳನೇ ತರಗತಿಯ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಅಧ್ಯಾಯವನ್ನು ತೆಗೆದು ಹಾಕಿರುವುದರಿಂದ ರಾಜ್ಯ ಸರ್ಕಾರಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಧನ್ಯವಾದ ಸಮರ್ಪಿಸಿದ್ದಾರೆ. ಇದನ್ನೂ ಓದಿ: 7ನೇ ತರಗತಿಯಲ್ಲಿದ್ದ ಟಿಪ್ಪು ಸುಲ್ತಾನ್ ಪಠ್ಯವನ್ನು ಕೈ ಬಿಟ್ಟ ಸರ್ಕಾರ
ಟಿಪ್ಪು ಸುಲ್ತಾನ್ ಎನ್ನುವ ಹೆಸರೇ ಕೊಡಗಿಗೆ ಒಂದು ಅಪಮಾನ. ಆತ ಏನನ್ನೂ ಮಾಡದಿದ್ದರೂ ಪಠ್ಯದಲ್ಲಿ ಆತನ ವಿಷಯವನ್ನಿಟ್ಟು ಐತಿಹಾಸಿಕವಾಗಿ ವಿಜೃಂಭಿಸುವ ಕೆಲಸವನ್ನು ಮಾಡಲಾಗಿತ್ತು. ಟಿಪ್ಪು ಮಾಡಿರುವುದು ಎಲ್ಲವೂ ಅನ್ಯಾಯದ ಕೆಲಸಗಳು. ಈ ಹಿನ್ನೆಲೆ ಜಿಲ್ಲೆಯ ಜನರು ಸೇರಿದಂತೆ ಅನೇಕರು ಟಿಪ್ಪು ಪಠ್ಯ ಕ್ರಮವನ್ನು ತರಬಾರದು ಎಂದು ಹೋರಾಟ ನಡೆಸಿದ್ದರು. ಇದೀಗ ರಾಜ್ಯ ಸರ್ಕಾರ ತಜ್ಞರ ಸಭೆ ನಡೆಸಿ ಏಳನೇ ತರಗತಿಯ ಪಠ್ಯದಿಂದ ಕೈ ಬಿಟ್ಟಿರುವುದು ಸಂತಸದ ವಿಷಯವಾಗಿದೆ ಎಂದರು.
ಅಷ್ಟೇ ಅಲ್ಲದೇ ದೇಶ ವಿರೋಧಿ ಟಿಪ್ಪು ಸುಲ್ತಾನ್ ಪಠ್ಯವನ್ನ ಪುಸ್ತಕದಿಂದ ತೆಗೆದು ಹಾಕುವಂತೆ ನಾವೂ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅದರಂತೆ ರಾಜ್ಯ ಸರ್ಕಾರ ತೀರ್ಮಾನವನ್ನು ತೆಗೆದುಕೊಂಡಿದೆ. ಇದಕ್ಕೆ ಸಹಕರಿಸಿದ ಟಿಪ್ಪು ವಿರೋಧಿ ಹೋರಾಟ ಸಮಿತಿ, ಸಂಘ ಪರಿವಾರದ ಮುಖಂಡರು ಹಾಗೂ ಸಿಎಂ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಶಾಸಕ ಅಪ್ಪಚ್ಚು ರಂಜನ್ ಧನ್ಯವಾದ ತಿಳಿಸಿದ್ದಾರೆ.