ರಾಯಚೂರು: ಲಿಂಗಸೂಗೂರು ತಾಲೂಕಿನ ಗುಂಡಲಬಂಡಾ ಜಲಪಾತ ನೋಡಲು ಹೋಗಿ ನಾಪತ್ತೆಯಾಗಿದ್ದ ತಂದೆ, ಮಗ ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಚಿತ್ರಕಲಾ ಶಿಕ್ಷಕನಾಗಿದ್ದ 35 ವರ್ಷದ ಕೃಷ್ಣಪ್ಪ ಹಾಗೂ ಅವರ ಮಗ 5 ವರ್ಷದ ಧನುಷ್ ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆ ಸಂಜೆವರೆಗೂ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಇಬ್ಬರು ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆಯಿಂದ ಹಟ್ಟಿ ಠಾಣೆ ಪೊಲೀಸ್, ಅಗ್ನಿಶಾಮಕ ದಳ, ಸ್ಥಳೀಯರು ಕಾರ್ಯಾಚರಣೆ ನಡೆಸಿ ಇಬ್ಬರ ಶವವನ್ನು ಹೊರತಂದಿದ್ದಾರೆ.
ದೇವದುರ್ಗ ತಾಲೂಕಿನ ಮೂಡಲಗುಂಡ ಗ್ರಾಮದ ನಾಲ್ವರು ನಿನ್ನೆ ಜಲಪಾತ ನೋಡಲು ಹೋದಾಗ ಏಕಾಏಕಿ ನೀರಿನ ಪ್ರಮಾಣ ಹಾಗೂ ಸೆಳೆತ ಹೆಚ್ಚಾಗಿ ಅಪಾಯಕ್ಕೆ ಸಿಲುಕಿದ್ದರು. ಮಾಹಾಂತೇಶ್ ಹಾಗೂ ಸಿದ್ದಣ್ಣ ಎಂಬವರನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಕಷ್ಣಪ್ಪ ಹಾಗೂ ಧನುಶ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದ್ದು, ಜಲಪಾತ ಭೋರ್ಗರೆಯುತ್ತಿದೆ. ಜಲಪಾತದ ರುದ್ರ ರಮಣಿಯ ದೃಶ್ಯ ನೋಡಲು ಹೋಗಿ ತಂದೆ ಮಗ ಪ್ರಾಣ ಕಳೆದುಕೊಂಡಿದ್ದಾರೆ.