ಶಿವಮೊಗ್ಗ: ಕೃಷಿ ಮಾರುಕಟ್ಟೆ ಶುಲ್ಕವನ್ನು ಶೇ. 1 ರಿಂದ ಶೇ. 0.35 ಕ್ಕೆ ಇಳಿಸಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಸೆಸ್ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಗೊಂದಲ ಉಂಟಾಗಿತ್ತು. ಎಪಿಎಂಸಿ ವರ್ತಕರು ತಮ್ಮ ವ್ಯಾಪಾರ ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್. ಈಶ್ವರಪ್ಪನವರ ಸಲಹೆಯಂತೆ ಸಂಸದರ ಜೊತೆಗೂಡಿ ಎಪಿಎಂಸಿ ವರ್ತಕರೊಡನೆ ಮುಖ್ಯಮಂತ್ರಿ ಅವರ ಬಳಿಗೆ ನಿಯೋಗ ತೆರಳಿದ್ದೇವು. ಈ ವೇಳೆ ಮುಖ್ಯಮಂತ್ರಿಗಳಿಗೆ ಮತ್ತು ಕೃಷಿ ಸಚಿವರಿಗೆ ಸೆಸ್ ಇಳಿಕೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಹೀಗಾಗಿ ಜು. 23 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಮನವಿಯನ್ನು ಮನ್ನಿಸಿದ ಸರ್ಕಾರ ಮಾರುಕಟ್ಟೆ ಶುಲ್ಕವನ್ನು ಶೇ.0.35ಕ್ಕೆ ಇಳಿಸಿದೆ. ಇದರಿಂದ ವ್ಯಾಪಾರಸ್ಥರಿಗೆ ಸಂತೋಷವಾಗಿದೆ ಎಂದಿದ್ದಾರೆ.
ಎಪಿಎಂಸಿ ತಿದ್ದುಪಡಿ ಕಾಯದ್ದೆಯ ಬಗ್ಗೆ ಸುದ್ದಿಗೋಷ್ಠಿ.
ಈ ಸುದ್ದಿಗೋಷ್ಠಿಯಲ್ಲಿ ಶಾಸಕರು ಹಾಗೂ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಶ್ರೀ ಆರಗ ಜ್ಞಾನೇಂದ್ರ, ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಎಸ್.ಅರುಣ್, ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಶಂಕರಪ್ಪ ಮೊದಲಾದವರು ಉಪಸ್ಥಿತರಿದ್ದರು. pic.twitter.com/otbgLkdCO8
— B Y Raghavendra (@BYRBJP) July 25, 2020
ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ರೈತರಿಗೆ ಅನುಕೂಲವಾಗಲಿ ಎಂದು ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಒಳಗೆ ಅಥವಾ ಮಾರುಕಟ್ಟೆಯ ಹೊರಗೆ ಮಾರಾಟ ಮಾಡುವುದರಿಂದ ದುಪ್ಪಟ್ಟು ಬೆಲೆ ಸಿಗಬಹುದು ಎಂದು ಜಾರಿಗೆ ತಂದಿತ್ತು. ಆದರೆ ಕೃಷಿ ಮಾರುಕಟ್ಟೆಗಳಲ್ಲಿ ಸೆಸ್ ಇಲ್ಲದಿದ್ದರೆ, ಅಥವಾ ಜಾಸ್ತಿ ಇದ್ದರೆ ರೈತರು ಮಾರುಕಟ್ಟೆ ಅಂಗಳಕ್ಕೆ ಬರುವುದಿಲ್ಲ ಎಂದು ಗಮನಿಸಿ ಈ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಟೆಂಡರ್ ಗಳು ಹೆಚ್ಚಾಗಿ ರೈತರಿಗೂ ಕೂಡ ಒಳ್ಳೆಯ ಬೆಲೆ ಸಿಗುತ್ತದೆ.
ಮಾರುಕಟ್ಟೆಗೂ ಕೂಡ ಆದಾಯ ಸಿಗುತ್ತದೆ ಎಂದಿದ್ದಾರೆ. ದೇಶದಲ್ಲಿಯೇ ಇದೊಂದು ಒಳ್ಳೆಯ ನಿರ್ಧಾರವಾಗಿದೆ. ಶಿವಮೊಗ್ಗ ಜಿಲ್ಲೆಯಿಂದಲೇ ಇದು ಆರಂಭವಾಗಿದೆ. ಈಗ ಸೋಮವಾರದಿಂದ ಎಪಿಎಂಸಿಗಳು ತಮ್ಮ ಮಾರಾಟವನ್ನು ಪುನಃ ಆರಂಭ ಮಾಡಲು ಸೂಚಿಸಲಾಗಿದೆ ಎಂದು ಶಾಸಕ ಜ್ಞಾನೇಂದ್ರ ಹೇಳಿದ್ದಾರೆ.