ಕೊಪ್ಪಳ: ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲವಾಗಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಹರಿಬಿಟ್ಟಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೀಲೋಗಲ್ ಗ್ರಾಮದ ನಿವಾಸಿ ಕೃಷ್ಣ(20) ವಾಲ್ಮೀಕಿ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ, ಸಮಾಜವನ್ನ ಪ್ರಚೋದನೆಗೊಳಿಸುವ ರೀತಿಯಲ್ಲಿ ಆಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದನು. ಇದನ್ನು ಗಮನಿಸಿದ ವಾಲ್ಮೀಕಿ ಸಮಾಜದ ಮುಖಂಡರಾದ ರಾಮಣ್ಣ ಗುಜ್ಜಲ್ಲ ಅವರು ನೇರವಾಗಿ ಹನುಮಸಾಗರ ಪೋಲಿಸ್ ಠಾಣೆಯಲ್ಲಿ ಕೃಷ್ಣ ವಿರುದ್ಧ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಹನುಮಸಾಗರ ಪೊಲೀಸರು ತನಿಖೆ ಕೈಗೊಂಡು ಕೃಷ್ಣನನ್ನು ಬಂಧಿಸಿದ್ದಾರೆ. ಕೃಷ್ಣನ ವಿರುದ್ಧ ಐಪಿಸಿ ಸೆಕ್ಷನ್ 295, 505, 506, 507ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.