ಶಿವಮೊಗ್ಗ: ರಿಟ್ಜ್ ಕಾರಿನಲ್ಲಿ ಬಂದ ಯುವಕರ ಗುಂಪೊಂದು ಸಿನಿಮೀಯ ರೀತಿಯಲ್ಲಿ ಯುವತಿಯನ್ನು ಅಪಹರಣ ಮಾಡಲು ಯತ್ನಿಸಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಯಡಿಯೂರು ಬಳಿ ನಡೆದಿದೆ.
ಯಡಿಯೂರು ಗ್ರಾಮದ ಯುವತಿ, ತಾಯಿಯೊಂದಿಗೆ ಇಂದು ರೇಣುಕಾಂಬ ದೇವಾಲಯಕ್ಕೆ ತೆರಳಿದ್ದಳು. ಈ ವೇಳೆ ಕಾರಿನಲ್ಲಿ ಬಂದ ಯುವಕರು ಮಚ್ಚು, ಲಾಂಗ್ ತೋರಿಸಿ ಯುವತಿಯನ್ನು ಅಪಹರಿಸಿ ಪರಾರಿಯಾಗಿದ್ದಾರೆ. ಈ ವಿಷಯ ಪೊಲೀಸರಿಗೆ ತಿಳಿಯುತ್ತಿದ್ದಂತೆ ಕಾರನ್ನು ತೀರ್ಥಹಳ್ಳಿ ಬಳಿ ತಡೆ ಹಿಡಿದಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೆ ಅಪಹರಣಕಾರರು ಯುವತಿ ಹಾಗೂ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಕಾಡಿನೊಳಗೆ ಓಡಿ ಹೋಗಿದ್ದಾರೆ.
ಪ್ರಕರಣದ ಕುರಿತು ಕೂಡಲೇ ಕಾರ್ಯಾಚರಣೆಗೆ ನಡೆಸಿದ ಪೊಲೀಸರು ಯುವತಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದು, ಈ ವೇಳೆ ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ ಗ್ರಾಮದ ಯುವಕ ನಾಗ ಆಕೆಯನ್ನು ಅಪಹರಿಸಲು ಯತ್ನಿಸಿದ್ದಾಗಿ ಮಾಹಿತಿ ತಿಳಿಸಿದ್ದಾಳೆ. ಅಂದಹಾಗೇ ಅಪಹರಣ ಮಾಡಲು ಯತ್ನಿಸಿದ ಯುವಕ ಹಾಗೂ ಯುವತಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಆರೋಪಿ ನಾಗ ಈಗಾಗಲೇ ಹಲವು ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ಯುವತಿಯರಿಗೆ ಮೋಸ ಮಾಡಿದ್ದಾನೆ. ಈ ವಿಷಯ ತಿಳಿದ ಯುವತಿ ಆರೋಪಿಯಿಂದ ಇತ್ತೀಚೆಗೆ ದೂರವಾಗಿದ್ದಳು. ಇದರಿಂದ ಸಿಟ್ಟಿಗೆದ್ದ ಆರೋಪಿ ಇಂದು ತನ್ನ ಸ್ನೇಹಿತರೊಂದಿಗೆ ಸೇರಿ ಯುವತಿಯನ್ನು ಅಪಹರಿಸಲು ಯತ್ನಿಸಿದ್ದ. ಘಟನೆಯ ಕುರಿತು ಶಿಮೊಗ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಲೆ ಮರೆಸಿಕೊಂಡಿರುವ ಆರೋಪಿ ನಾಗನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.