ಹಾಸನ: ನನಗೆ ಆದ ಮೋಸಕ್ಕೆ ಅವನನ್ನು ಮಾತ್ರ ಸುಮ್ಮನೆ ಬಿಡಲ್ಲ ಎಂದು ತನ್ನ ಪ್ರಿಯಕರನನ್ನು ಮದುವೆಯಾದ ಹುಡುಗಿಗೆ ಭಗ್ನ ಪ್ರೇಮಿಯೊಬ್ಬಳು ಎಚ್ಚರಿಕೆ ನೀಡಿ ಹೋದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರಲ್ಲಿ ನಡೆದಿದೆ.
ಸಕಲೇಶಪುರ ಮೂಲದ ಯುವಕನೊಬ್ಬ ಇಬ್ಬರು ಯುವತಿಯರನ್ನು ಪ್ರೀತಿಸಿದ್ದನಂತೆ. ಆದರೆ ಯುವಕ ಇಬ್ಬರನ್ನು ಪ್ರೀತಿಸುತ್ತಿರುವ ವಿಷಯ ಯುವತಿಯರಿಗೆ ತಿಳಿದಿರಲಿಲ್ಲ. ಆದರೆ ಇಬ್ಬರು ಯುವತಿಯರು ಏಕಕಾಲದಲ್ಲಿ ತಮ್ಮನ್ನು ಮದುವೆಯಾಗುವಂತೆ ಯುವಕನ ಬಳಿ ಜಗಳ ಮಾಡಿದ್ದಾರೆ. ಈ ವೇಳೆ ತ್ರಿಕೋನ ಪ್ರೇಮ ಕಥೆ ಬಯಲಾಗಿದೆ.
ಇಬ್ಬರೂ ಯುವತಿಯರು ತನ್ನನ್ನೇ ಮದುವೆಯಾಗುವಂತೆ ಪಟ್ಟು ಹಿಡಿದಿದ್ದರಿಂದ ಪರಿಚಯಸ್ಥರು ರಾಜಿ, ಪಂಚಾಯತಿ ಮಾಡಲು ಮುಂದಾದರೂ ಫಲಕಾರಿಯಾಗಿಲ್ಲ. ಇಬ್ಬರಲ್ಲಿ ಒಬ್ಬಳು ಯುವತಿ ವಿಷ ಸೇವಿಸಿ ಅದೃಷ್ಟವಶಾತ್ ಬದುಕಿ ಬಂದಿದ್ದಾಳೆ. ಇಷ್ಟೆಲ್ಲಾ ಅವಾಂತರದ ನಂತರ ಇಬ್ಬರ ಹೆಸರನ್ನು ಚೀಟಿಯಲ್ಲಿ ಬರೆದು ಹಾಕುತ್ತೇವೆ. ಯಾರ ಹೆಸರು ಬರುತ್ತದೆಯೋ ಆ ಹುಡುಗಿಯನ್ನು ಯುವಕ ವರಿಸುತ್ತಾನೆ ಎಂದು ಪರಿಚಯಸ್ಥರು, ಸಂಬಂಧಿಕರು ತೀರ್ಮಾನ ಮಾಡಿದ್ದಾರೆ. ಇದನ್ನೂ ಓದಿ: ಮೈಸೂರಿನ ದರೋಡೆ, ಶೂಟ್ಔಟ್ ಪ್ರಕರಣ- ಖತರ್ನಾಕ್ ಬಾಂಬೆ ಬುಡ್ಡಾ ಅಂದರ್
ಈ ವೇಳೆ ಒಂದು ನಿರ್ಧಾರಕ್ಕೆ ಬಂದ ಯುವಕ ತನಗಾಗಿ ವಿಷ ಸೇವಿಸಿ ಬದುಕಿ ಬಂದ ಯುವತಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ. ಇದರಿಂದ ಕೋಪಗೊಂಡ ಮತ್ತೊಬ್ಬ ಯುವತಿ ಯುವಕನ ಕೆನ್ನೆಗೆ ಬಾರಿಸಿದ್ದಾಳೆ. ನಂತರ ಯುವಕ ಮದುವೆಯಾಗಲು ನಿರ್ಧರಿಸಿದ ಯುವತಿ ಬಳಿ ಬಂದು, ನನಗೆ ನಿನ್ನ ಮೇಲೆ ಕೋಪವಿಲ್ಲ. ಮನಸ್ಸಲ್ಲಿ ಏನೂ ಇಟ್ಟುಕೊಳ್ಳಬೇಡ. ಎಲ್ಲಿಯಾದರೂ ಸಿಕ್ಕಾಗ ಮಾತನಾಡಿಸು. ನಿನ್ನ ಬದುಕು ಚೆನ್ನಾಗಿರಲಿ ಎಂದಿದ್ದಾಳೆ. ಆದರೆ ನನಗೆ ಮೋಸ ಮಾಡಿದವನನ್ನು ಮಾತ್ರ ಸುಮ್ಮನೆ ಬಿಡಲ್ಲ ಎಂದು ಯುವತಿ ಹೊರಟು ಹೋಗಿದ್ದಾಳೆ. ಈ ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಪ್ರಕರಣದ ವಿಡಿಯೋ ಮಾತ್ರ ವೈರಲ್ ಆಗಿದೆ. ಇದನ್ನೂ ಓದಿ: ಕೋವಿಡ್ಗೂ ಮೊದಲು ಬಂದಿದ್ದ ನಿಫಾ ವೈರಸ್ಗೆ ಕೇರಳದಲ್ಲಿ 12ರ ಬಾಲಕ ಬಲಿ