ಲಕ್ನೋ: ನೆರೆಮನೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೋರ್ವ ಮದುವೆ ನಿಶ್ಚಿಯವಾಗಿದ್ದ ಯುವತಿಯ ಅಶ್ಲೀಲ ಫೋಟೋಗಳನ್ನು ವರನಿಗೆ ಕಳುಹಿಸಿದ್ದರಿಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದಿದೆ.
ಆರೋಪಿಯನ್ನು ರವಿ ಪ್ರಕಾಶ್ ಎಂದು ಗುರುತಿಸಲಾಗಿದ್ದು, ಈತ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರಿಂದ ತೀವ್ರವಾಗಿ ಮನನೊಂದ ಯುವತಿ ತನ್ನ ಕೋಣೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗುರುವಾರ ಬೆಳಗ್ಗೆ ಸೀಲಿಂಗ್ ಫ್ಯಾನ್ನಲ್ಲಿ ಯುವತಿ ನೇತಾಡುತ್ತಿರುವುದನ್ನು ಕಂಡು ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡೇ ಮಾಡ್ತೀವಿ – ಗುಂಡು ಹಾರಿಸ್ತೀರಾ ಹಾರಿಸಿ: ಮುತಾಲಿಕ್
ಈ ಕುರಿತಂತೆ ಪ್ರತಿಕ್ರಿಯಿಸಿದ ಮೃತ ಯುವತಿಯ ಸಹೋದರ, ಕೆಲವು ದಿನಗಳ ಹಿಂದೆ ಆರೋಪಿ ಆಕೆಯ ಐಡಿಯನ್ನು ಕದ್ದಿದ್ದು, ನಂತರ ಅಶ್ಲೀಲ ಫೋಟೋಗಳನ್ನು ಮಾಡಲು ಬಳಸಿಕೊಂಡಿದ್ದಾನೆ. ಅಲ್ಲದೇ ಆ ಫೋಟೋಗಳನ್ನು ವರ ಮತ್ತು ಆತನ ಕುಟುಂಬಸ್ಥರಿಗೆ ಕಳುಹಿಸಿದ್ದಾನೆ. ಇದರಿಂದಾಗಿ ಮದುವೆ ರದ್ದುಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಇದೀಗ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಜೊತೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲಖಿಂಪುರ ಖೇರಿಯ ಹೆಚ್ಚುವರಿ ಎಸ್ಪಿ ಅರುಣ್ ಕುಮಾರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಚೈಲ್ಡೀಶ್, ಅಪ್ರಬುದ್ಧ ನಾಯಕ – ರಾಹುಲ್ ಗಾಂಧಿಯಿಂದಲೇ ಕಾಂಗ್ರೆಸ್ ಅವನತಿ