ಬೆಂಗಳೂರು: ಪರಿಚಯಸ್ಥ ರೌಡಿಗಳಿಂದಲೇ ಗೃಹಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆಯೊಂದು ಸಿಲಿಕಾನ್ ಸಿಟಿಯ ಹೊರವಲಯ ನೆಲಮಂಗಲ ಸಮೀಪದ ಸಿದ್ದನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ಹಾಗೂ ಆತನ ತಂಡ ಈ ಹೀನಾಯ ಕೃತ್ಯವನ್ನು ಎಸಗಿದ್ದಾರೆ. ರೌಡಿಶೀಟರ್ ರಾಘವೇಂದ್ರ ಕುಮಾರ್, ಪುನೀತ್, ವೆಂಕಟೇಶ್ ಎಂಬ ಮೂವರನ್ನು ಬಂಧಿಸಲಾಗಿದೆ. ಆದರೆ ಮತ್ತೊಬ್ಬ ಆರೋಪಿ ವಿಜಿ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ನಡೆದುದ್ದೇನು?: ಸಂತ್ರಸ್ತೆ ತನ್ನ ಪತಿಯ ಜೊತೆ ಸಿದ್ದನಹೊಸಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಆರೋಪಿಗಳು ಸಂತ್ರಸ್ತೆಗೆ ಮೊದಲಿನಿಂದಲೇ ಪರಿಚಯವಿದ್ದರು. ಆದರೆ ಆರು ದಿನಗಳ ಹಿಂದೆ ಆರೋಪಿಗಳು ಕುಡಿದ ಮತ್ತಿನಲ್ಲಿ ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ಸಂತ್ರಸ್ತೆಯ ಮನೆಗೆ ನುಗ್ಗಿದ್ದಾರೆ. ರೌಡಿಶೀಟರ್ ರಾಘವೇಂದ್ರ ಸೇರಿದಂತೆ ನಾಲ್ವರು ಕಾಮುಕರು ಸೇರಿ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.
ನೊಂದ ಸಂತ್ರಸ್ತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತೀವ್ರ ವಿಚಾರಣೆ ಆರಂಭಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.