ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅಭಿನಯದ `ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಬಿಡುಗಡೆಯಾಗಿ ಭರ್ಜರಿಯಾಗಿ ಯಶಸ್ಸು ಕಾಣುತ್ತಿದೆ. ಸಿನಿಮಾದ ಸಕ್ಸಸ್ ಪಾರ್ಟಿ ಕೂಡ ಮಾಡಿದ್ದಾರೆ. ಆದರೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ಮೆಗಾಸ್ಟಾರ್ ಜಿರಂಜೀವಿ ಸೋಮವಾರ ಭೇಟಿಯಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.
ಚಿರಂಜೀವಿ ತಮ್ಮ ಪತ್ನಿ ಜೊತೆಗೆ ಅಮರಾವತಿಯ ಜಗನ್ ಮೋಹನ್ ರೆಡ್ಡಿಯ ತಾಡಪಲ್ಲಿಯ ನಿವಾಸಕ್ಕೆ ಆಗಮಿಸಿದ್ದಾರೆ. ಚಿರಂಜೀವಿ, ಜಗನ್ ಮೋಹನ್ ರೆಡ್ಡಿಯನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಾಜಕೀಯ ಹಾಗೂ ಸಿನಿಮಾ ವಿಷಯಗಳ ಕುರಿತು ಚರ್ಚಿಸಿದ್ದಾರೆ.
ಈ ಭೇಟಿಗೆ ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಮತ್ತೆ ಚಿರಂಜೀವಿ ರಾಜಕೀಯಕ್ಕೆ ರೀ ಎಂಟ್ರಿ ಕೊಡ್ತಾರಾ ಎನ್ನುವ ಅನುಮಾನ ಹುಟ್ಟು ಹಾಕಿದೆ. ಈ ಬಗ್ಗೆ ಸಿಎಂ ಜಗನ್ ತಮ್ಮ ಫೇಸ್ಬುಕ್ನಲ್ಲಿ, “ನಟ ಚಿರಂಜೀವಿ ಸದಾ ಸಂತೋಷ ಹಾಗೂ ನೆನಪುಗಳನ್ನು ನಮಗೆ ನೀಡುತ್ತಿರಲಿ” ಎಂದು ಪೋಸ್ಟ್ ಮಾಡಿದ್ದಾರೆ.
ಚಿರಂಜೀವಿ ಕೊನೆಯದಾಗಿ ಸೈರಾ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರವನ್ನು ನಟ ರಾಮ್ ಚರಣ್ ನಿರ್ಮಿಸಿದ್ದು, ಸ್ಟಾರ್ ನಟರಾದ ಚಿರಂಜೀವಿ, ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ತಮನ್ನಾ, ನಯನತಾರ, ಜಗಪತಿ ಬಾಬು ಸೇರಿದಂತೆ ಬಹುದೊಡ್ಡ ಕಲಾವಿದರ ಬಳಗ ಚಿತ್ರದಲ್ಲಿ ಅಭಿನಯಿಸಿದ್ದಾರೆ.