ಅಮರಾವತಿ: ತ್ವರಿತ ಸಾಲ ನೀಡುವ ಆ್ಯಪ್ (Loan App) ಮೂಲಕ 2,000 ರೂ. ಸಾಲ ಪಡೆದಿದ್ದ ವ್ಯಕ್ತಿಯೊಬ್ಬ ಆ್ಯಪ್ ಏಜೆಂಟರ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.
ಹೈದರಾಬಾದ್ ಮೂಲದ ನರೇಂದ್ರ (25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆ್ಯಪ್ ಏಜೆಂಟರು ತನ್ನ ಪತ್ನಿಯ ಮಾರ್ಫ್ ಮಾಡಿದ ಅಶ್ಲೀಲ ಫೋಟೋವನ್ನು ನರೇಂದ್ರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದಾರೆ. ಇದರಿಂದ ಮನನೊಂದ ನರೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಮುಂದಿನ 5 ವರ್ಷದಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ ವಿಶ್ವದಲ್ಲೇ ಭಾರತ ನಂಬರ್ 1: ಗಡ್ಕರಿ ಭವಿಷ್ಯ
25 ವರ್ಷದ ನರೇಂದ್ರ ಕಳೆದ 6 ತಿಂಗಳ ಹಿಂದೆಯಷ್ಟೇ ಅಖಿಲಾ ಎಂಬಾಕೆಯೊಂದಿಗೆ ಪ್ರೇಮ ವಿವಾಹವಾಗಿದ್ದ. ದಂಪತಿ ಇಬ್ಬರೂ ವಿಶಾಖಪಟ್ಟಂನಲ್ಲಿ ನೆಲೆಸಿದ್ದರು. ನರೇಂದ್ರ ಮೀನುಗಾರಿಕೆ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಹಮಾವಾನ ವೈಪರಿತ್ಯದಿಂದಾಗಿ ಆರ್ಥಿಕ ನಷ್ಟ ಉಂಟಾಗಿತ್ತು. ಈ ವೇಳೆ ತನ್ನ ಖರ್ಚು ನಿಭಾಯಿಸಲು ತ್ವರಿತ ಸಾಲ ನೀಡುವ ಆ್ಯಪ್ನಿಂದ 2,000 ರೂ. ಸಾಲ ಪಡೆದುಕೊಂಡಿದ್ದ. ಸಾಲ ಪಡೆದ ಕೆಲದಿನಗಳ ನಂತರ ಆ್ಯಪ್ ಏಜೆಂಟರು ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಅಸಭ್ಯ ಭಾಷೆಗಳಿಂದ ಸಂದೇಶ ಕಳುಹಿಸಿದ್ದಾರೆ. ಇಷ್ಟಕ್ಕೆ ಬಿಡದೇ ನರೇಂದ್ರ ಪತ್ನಿಯ ಮಾರ್ಫ್ ಮಾಡಿದ ಅಶ್ಲೀಲ ಫೋಟೋವನ್ನ ಕುಟುಂಬಸ್ಥರು, ಸ್ನೇಹಿತರಿಗೆ ಕಳುಹಿಸಿದ್ದಾರೆ. ಕೊನೆಗೆ ಆತನ ಪತ್ನಿಗೂ ಫೋಟೋ ಕಳುಹಿಸಿದ ಬಳಿಕ ಈ ವಿಷಯ ನರೇಂದ್ರನಿಗೆ ಗೊತ್ತಾಗಿದೆ.
ಬಳಿಕ 2 ಸಾವಿರ ರೂ. ಸಾಲ ತೀರಿಸಲು ಬೇರೊಬ್ಬರ ಬಳಿ ಸಹಾಯ ಕೇಳಿದ್ದರು. ಆದ್ರೆ ಹಣ ಸಿಗದೇ ಸಾಲ ಮರುಪಾವತಿ ಮಾಡಲಾಗಲಿಲ್ಲ. ಇದರಿಂದ ಆ್ಯಪ್ ಏಜೆಂಟರು ನಿರಂತರವಾಗಿ ಕಿರುಕುಳ ನೀಡಲು ಶುರು ಮಾಡಿದರು. ಕೊನೆಗೆ ಮನನೊಂದ ನರೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ | ಹಣಕ್ಕಾಗಿ ಕೇಸ್ ಮೇಲೆ ಕೇಸ್ – ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್
ಒಂದೇ ವಾರದಲ್ಲಿ 3 ಕೇಸ್:
ಆಂಧ್ರಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ ತ್ವರಿತ ಆ್ಯಪ್ನಿಂದ ಸಾಲ ಪಡೆದವರ 3ನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. ಇದಲ್ಲದೇ ನೆಂದ್ಯಾಲ್ ಜಿಲ್ಲೆಯಲ್ಲಿ ಇಂದು (ಡಿ.11) ಸಹ ಯುವತಿಯೊಬ್ಬಳು ಆಪ್ ಏಜೆಂಟರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಳು, ಅದೃಷ್ಟವಶಾತ್ ಪೊಲೀಸರು ಆಕೆಯನ್ನ ರಕ್ಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಶರಾವತಿ ಜಲವಿದ್ಯುತ್ ಯೋಜನೆ – ಸಂಸತ್ನಲ್ಲಿ ಕನ್ನಡದಲ್ಲೇ ಪ್ರಸ್ತಾಪಿಸಿದ ಬಿ.ವೈ.ರಾಘವೇಂದ್ರ