ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊನೆ ಕ್ಷಣದಲ್ಲಿ ಡಿಕೆ ಶಿವಕುಮಾರ್ ಕೈತಪ್ಪಲು ಕಾರಣ ಯಾರು ಎಂಬ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.
ಒಂದು ಹಂತದಲ್ಲಿ ಅಧ್ಯಕ್ಷ ಸ್ಥಾನ ಕೈ ತಪ್ಪಲು ದೇವೇಗೌಡರು ಪರೋಕ್ಷ ಕಾರಣರಾದ್ರೆ, ಮತ್ತೊಂದು ಕಡೆ ಮಾಜಿ ಸಂಸದೆ ರಮ್ಯಾ ಪ್ರಯೋಗಿಸಿದ ದಾಳದಿಂದಾಗಿ ಡಿಕೆಶಿಗೆ ಹಿನ್ನಡೆಯಾಗಿದೆಯಂತೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಪಬ್ಲಿಕ್ ಟಿವಿಗೆ ಸಿಕ್ಕಿರೋ ಮಾಹಿತಿ ಪ್ರಕಾರ ಸೋಮವಾರ ರಾಹುಲ್ ಗಾಂಧಿ ಭೇಟಿಯಾದ ಮಂಡ್ಯದ ಮಾಜಿ ಸಂಸದೆ, ನಟಿ ರಮ್ಯಾ, ಡಿಕೆ ಶಿವಕುಮಾರ್ ವಿರುದ್ಧ ಕಿವಿ ಊದಿದ್ದಾರಂತೆ. ರಾಮನಗರದಲ್ಲಿ ಡಿಕೆಶಿ ಸಹೋದರರು ಪ್ರಾಬಲ್ಯ ಸಾಧಿಸಿದ್ದು, ಒಂದು ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಅವ್ರನ್ನ ಹಿಡಿಯೋದು ಕಷ್ಟ ಅಂತಾ ಎಚ್ಚರಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.
ಅಲ್ಲದೇ ಒಕ್ಕಲಿಗ ಸಮುದಾಯದಲ್ಲಿ ಡಿಕೆಶಿ ಸಹೋದರರ ಬಗ್ಗೆ ಅಷ್ಟೇನೂ ಒಳ್ಳೆ ಅಭಿಪ್ರಾಯ ಇಲ್ಲದಿರುವುದರಿಂದ ಈಗ ಆಯ್ಕೆ ಮಾಡಿದ್ರೆ ಪಕ್ಷಕ್ಕೆ ತೀವ್ರ ಹಿನ್ನಡೆ ಆಗಲಿದೆ ಎಂದು ರಾಹುಲ್ ಗಾಂಧಿಗೆ ಮನದಟ್ಟು ಮಾಡಿದ್ದಾರಂತೆ. ಇದರ ಬದಲಿಗೆ ಪರಮೇಶ್ವರ್ ಅವರನ್ನೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿದರೆ ಪಕ್ಷ ಅಧಿಕಾರಕ್ಕೆ ಬರಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಇದೀಗ ರಮ್ಯಾ ರಾಜಕೀಯದಿಂದ ಡಿಕೆಶಿ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.