ಬೆಳ್ಳಿತೆರೆ ಬಾನಂಗಳದಲ್ಲಿ ವೀಲ್ಚೇರ್ ರೋಮಿಯೋನ ಪಯಣ ಶುರುವಾಗಿದೆ. ನಿರೀಕ್ಷೆಗೆ ತಕ್ಕಂತೆ ಪ್ರೇಕ್ಷಕರನ್ನು ರೋಮಿಯೋ ರಂಜಿಸಿದ್ದಾನೆ. ಸಿನಿಮಾ ಆರಂಭದಿಂದ ಹಿಡಿದು ಅಂತ್ಯದವರೆಗೂ ಅದೇ ಕುತೂಹಲ ಕಾಯ್ದುಕೊಂಡು, ಭರ್ಜರಿ ಡೈಲಾಗ್, ವಿಭಿನ್ನ ಪಾತ್ರಗಳು, ವಿಶೇಷ ಕಥಾನಕದ ಮೂಲಕ ವೀಲ್ಚೇರ್ ರೋಮಿಯೋ ಚಿತ್ರ ಪ್ರೇಮಿಗಳ ಹೃದಯ ಕಲಕಿದ್ದಾನೆ.
ವೀಲ್ಚೇರ್ ರೋಮಿಯೋ ಮಾಮೂಲಿ ಸಿನಿಮಾಗಳ ಕಥೆಯಂತು ಅಲ್ಲವೇ ಅಲ್ಲ. ಇದೊಂದು ಅಪರೂಪದ ಕಥೆ. ಇದು ನಿಮ್ಮನ್ನ ಭಾವನೆಗಳ ಲೋಕಕ್ಕೆ ಕರೆದೊಯ್ಯುವ ಇಂಟ್ರೆಸ್ಟಿಂಗ್ ಸ್ಟೋರಿ. ಬಾಲ್ಯದಿಂದ ಮೂಳೆ ಖಾಯಿಲೆಗೆ ಒಳಗಾದ ಹೀರೋ, ಈತ ದೊಡ್ಡವನಾದ ಮೇಲೆ ಮದುವೆ ಮಾಡಲು ಅಪ್ಪ ಸಿದ್ಧನಾಗುತ್ತಾನೆ. ಇಂದಿನ ಕಾಲದಲ್ಲಿ ಎಲ್ಲವೂ ಸರಿ ಇದ್ದು ಹೆಣ್ಣು ಕೊಡುವುದು ಕಷ್ಟ. ಇನ್ನೂ ಕಾಲಿಲ್ಲದ ನಾಯಕನಿಗೆ ಜೊತೆಯಾಗುವವರು ಯಾರು? ಮಗನ ಆಸೆ ಈಡೇರಿಸಲು ಅಪ್ಪ ಎಷ್ಟೆಲ್ಲಾ ಪರದಾಟ ನಡೆಸುತ್ತಾನೆ? ಹೀಗೆ ಸಾಗುವ ಕಥೆಯಲ್ಲಿ ನಾನಾ ರೋಚಕ ತಿರುವುಗಳು. ಕೊನೆಗೆ ನಾಯಕನಿಗೆ ಜೋಡಿ ಸಿಗುತ್ತಾಳಾ? ಆಕೆ ಈತನ್ನು ಒಪ್ಪಿಕೊಂಡಿದ್ದಾದ್ರೂ ಏಕೆ? ಅನ್ನೋದನ್ನು ನೀವು ಥಿಯೇಟರ್ನಲ್ಲಿಯೇ ನೋಡ್ಬೇಕು. ಇದನ್ನೂ ಓದಿ: ಸ್ಕಿಡ್ ಆಗಿ ಕಮರಿಗೆ ಬಿದ್ದ ಸೈನಿಕರ ವಾಹನ: ಮೃತಪಟ್ಟ 7 ಯೋಧರು
ನಿರ್ದೇಶಕ ನಾಗರಾಜ್ ಮೊದಲ ಬಾರಿಗೆ ನಿರ್ದೇಶನದ ಅಖಾಡಕ್ಕೆ ಇಳಿದಿದ್ರೂ, ಪಳಗಿದ ನಿರ್ದೇಶಕನ ರೀತಿ ಸಿನಿಮಾವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಹದಿನೈದು ವರ್ಷದ ತಮ್ಮ ಜರ್ನಿಯ ಅನುಭವಗಳನ್ನು ಅದ್ಭುತವಾಗಿ ಬಳಸಿಕೊಂಡಿರುವ ನಟರಾಜ್, ಮೂಲತಃ ಡೈಲಾಗ್ ರೈಟರ್ ಆಗಿದ್ದವರು. ಆದ್ರೂ ವೀಲ್ಚೇರ್ ರೋಮಿಯೋ ಸಿನಿಮಾಗೆ ಗುರು ಕಶ್ಯಪ್ ಅವರಿಂದ ಪಂಚಿಂಗ್ ಸಂಭಾಷಣೆ ಬರೆಸಿ ಸೈ ಎನಿಸಿಕೊಂಡಿದ್ದಾರೆ.
ಸೂಕ್ಷ್ಮ ಕಥೆಗೆ ಅಷ್ಟೇ ಪವರ್ ಫುಲ್ ಡೈಲಾಗ್ ಸಿನಿಮಾದುದ್ದಕ್ಕೂ ಪ್ರೇಕ್ಷಕರನ್ನು ನಗುವಿನ ಕಡಲಲ್ಲಿ ತೇಲಿಸುವಂತೆ ಮಾಡುತ್ತವೆ. ಭರತ್ ಬಿಜೆ ಸಂಗೀತದ ಸ್ಪರ್ಶ ಹಾಗೂ ಸಂತೋಷ್ ಪಾಂಡಿ ಛಾಯಾಗ್ರಾಹಣದ ಸೊಗಸು ಸಿನಿಮಾದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕಲಾಬಳಗದ ಅಭಿನಯಕ್ಕೆ ಬರುವುದಾದರೆ, ರಂಗಾಯಣ ರಘು ಜಾಕ್ ಮಾಮಾ ಪಾತ್ರದಲ್ಲಿ ಅಕ್ಷಶರಃ ಮಿಂಚಿದ್ದಾರೆ. ಸುಚೇಂದ್ರ ಪ್ರಸಾದ್ ಪ್ರತಿಮ ಅಭಿನಯ, ತಬಲನಾಣಿ, ಗಿರಿಶಿವಣ್ಣ ಚಿತ್ರದ ಪ್ಲಸ್ ಪಾಯಿಂಟ್. ಅಂಧ ವೇಶ್ಯೆ ಪಾತ್ರದಲ್ಲಿ ನಟಿ ಮಯೂರಿ ಅಭಿನಯ ಅಮೋಘ ಅಂದ್ರು ತಪ್ಪಾಗಲಿಕ್ಕಿಲ್ಲ.
ರಾಮ್ ಚೇತನ್ ಮೊದಲ ಬಾರಿಗೆ ಹೀರೋ ಆಗಿ ಅದ್ಭುತವಾಗಿ ನಟಿಸಿದ್ದಾರೆ. ಇಡೀ ಸಿನಿಮಾವನ್ನು ವೀಲ್ ಚೇರ್ ಮೇಲೆ ಕುಳಿತು ಚಾಲೆಂಜಿಂಗ್ ರೋಲ್ ಮಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಒಟ್ನಲ್ಲಿ ವೀಲ್ ಚೇರ್ ರೋಮಿಯೋ ನಿಜಕ್ಕೂ ಹೊಸ ಪ್ರಯತ್ನ. ತೆರೆಹಿಂದಿ ದುಡಿದವರು, ತೆರೆಮುಂದೆ ಬಣ್ಣ ಹಚ್ಚಿದವರು ಎಲ್ಲರ ಪರಿಶ್ರಮ ಇಲ್ಲಿ ಎದ್ದು ಕಾಣುತ್ತದೆ. ಇದನ್ನೂ ಓದಿ: ಕಳೆದ ಎಂಟು ವರ್ಷಗಳಿಂದ ಬಡವರಿಗಾಗಿ ಮೋದಿ ಸರ್ಕಾರ ಕೆಲಸ ಮಾಡ್ತಿದೆ: ಪ್ರಹ್ಲಾದ್ ಜೋಶಿ