ಕಲಬುರಗಿ: ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಬಲಗೊಳಿಸುವ ನಿಟ್ಟಿನಲ್ಲಿ ಇಂಡಿಯಾ ಒಕ್ಕೂಟದಲ್ಲಿ (I.N.D.I.A Alliance) ಮುಂದುವರೆಯಲು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆಯಲಾಗಿದೆ. ಅಲ್ಲದೇ ಈ ಬಗ್ಗೆ ಮಾತನಾಡುವ ಪ್ರಯತ್ನ ಸಹ ಮಾಡಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ತಿಳಿಸಿದ್ದಾರೆ.
ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಐ.ಎನ್.ಡಿ.ಐ.ಎ ಒಕ್ಕೂಟ ಬಿಟ್ಟು ಹೋಗುವ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ. ಪ್ರಮುಖವಾಗಿ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು ಬಳಿಕ ಸ್ಪಷ್ಟಪಡಿಸುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೀವಂತವಾಗಿದ್ರೆ ಶಾಮನೂರು ಶಿವಶಂಕರಪ್ಪರನ್ನ ಸಸ್ಪೆಂಡ್ ಮಾಡಲಿ: ಹೆಚ್.ವಿಶ್ವನಾಥ್
ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಬಲಪಡಿಸುವ ಮನೋಭಾವ ಹೊಂದಿರುವ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಇತರರೊಂದಿಗೆ ಮಾತನಾಡಿ ತಾವೆಲ್ಲರೂ ಒಗ್ಗಟ್ಟಿನಿಂದ ಒಗ್ಗೂಡಿದಾಗ ಉತ್ತಮ ಫೈಟ್ ಕೊಡಬಹುದಾಗಿದೆ ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಬಿಹಾರದ ರಾಜಕೀಯದಲ್ಲಿ ಬಿಕ್ಕಟ್ಟು ಎದುರಾಗಿದೆ. ಐ.ಎನ್.ಡಿ.ಐ.ಎ ಒಕ್ಕೂಟದಿಂದ ಜೆಡಿಯು ಹೊರಬರುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿದೆ. ಬಿಜೆಪಿ ಜೊತೆ ಸೇರಿ ನಿತೀಶ್ ಕುಮಾರ್ (Nitish Kumar) ಸರ್ಕಾರ ರಚನೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದರ ನಡುವೆಯೇ ಲಾಲೂ ಪ್ರಸಾದ್ ಯಾದವ್ ಕೆಲ ಶಾಸಕರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಐ.ಎನ್.ಡಿ.ಐ.ಎ ಒಕ್ಕೂಟಕ್ಕೆ ಆತಂಕ ಎದುರಾಗಿದೆ. ಇದನ್ನೂ ಓದಿ: ನಿಗಮ-ಮಂಡಳಿ ಬೇಡವೇ ಬೇಡ, ನನಗೆ ಸಚಿವ ಸ್ಥಾನ ಕೊಡಿ: ಶಾಸಕ ಸುಬ್ಬಾರೆಡ್ಡಿ ಪಟ್ಟು