ಹೈದರಾಬಾದ್: ಟಿಆರ್ಎಸ್ ಕಾರ್ಯಕರ್ತರಿಗಿಂತ ನಮ್ಮ ಪಕ್ಷದ ಕಾರ್ಯಕರ್ತರು ದೊಡ್ಡ ಗೂಂಡಾಗಳು. ಆದರೆ ಅವರು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಾರೆ ಎಂಬ ಭಾರತೀಯ ಜನತಾ ಪಕ್ಷದ ತೆಲಂಗಾಣ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಅವರ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರನ್ನು ತರಾಟೆಗೆ ತೆಗೆದುಕೊಂಡ ಸಂಜಯ್ ಅವರು, ಟಿಆರ್ಎಸ್ ಸರ್ಕಾರ ಹಣ ಮತ್ತು ಅಧಿಕಾರವಿರುವುದರಿಂದ ದಾದಾಗಿರಿ ಮಾಡುತ್ತಿದೆ. ಆದರೆ ಬಿಜೆಪಿ ಕಾರ್ಯಕರ್ತರು ಟಿಆರ್ಎಸ್ ಕಾರ್ಯಕರ್ತರಿಗಿಂತ ದೊಡ್ಡ ಗೂಂಡಾಗಳು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವ ಬಳಿಕ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಪ್ಲಾನ್- ಆಗಸ್ಟ್ 26ರಂದು ನಡೆಯುತ್ತಾ ಹೈಡ್ರಾಮಾ..?
ಜನಾಂವದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಿನ್ನೆ ಪಾಲಕುರ್ತಿಯಿಂದ ರಸ್ತೆ ಬಂದ್ ಮಾಡಿದ್ದರೂ ಜನರ ಗುಂಪು ಬಂದಿತ್ತು. ಕೆಲವರು ದಾದಾಗಿರಿ ಮಾಡುತ್ತಿದ್ದಾರೆ. ನಾವು ಕೂಡ ದಾದಾಗಳೇ. ಆದರೆ ಬಿಜೆಪಿ ಕಾರ್ಯಕರ್ತರು ಜನರ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಕೆಸಿಆರ್ ಮತ್ತು ಅವರ ಕುಟುಂಬದವರು ಕೇವಲ ಅಧಿಕಾರವಿದೆ ಎಂಬ ಕಾರಣಕ್ಕೆ ಕಳ್ಳರಂತೆ ಎಲ್ಲವನ್ನೂ ಆಕ್ರಮಿಸಿಕೊಳ್ಳುತ್ತಿದ್ದಾರೆ. ಹಣ ಮತ್ತು ಅಧಿಕಾರವಿದೆ ಎಂಬ ಕಾರಣಕ್ಕೆ ಪೊಲೀಸರ ನೆರವಿನಿಂದ ದಾದಾಗಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ನಾವು ನಿಮಗಿಂತ ದೊಡ್ಡ ಗೂಂಡಾಗಳು ಮತ್ತು ಬಿಜೆಪಿಯವರು ಬಡವರಿಗಾಗಿ ಗೂಂಡಾಗಿರಿ ಮಾಡುತ್ತಾರೆ. ನಿಮ್ಮಿಂದ ತೆಲಂಗಾಣವನ್ನು ಉಳಿಸಲು ನಾವು ರೌಡಿಸಂ ಕೂಡ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾಲದಲ್ಲೇ ತುಮಕೂರಲ್ಲಿ ಸಾವರ್ಕರ್ ಪಾರ್ಕ್- ಹಳೆ ಫೋಟೋ ವೈರಲ್, ಕೈ ಪಡೆಗೆ ಮುಜುಗರ
ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಟಿಆರ್ಎಸ್ ಸರ್ಕಾರದ ವಿರುದ್ಧ ಬಿಜೆಪಿ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿದ್ದರೆ, ಕೆಸಿಆರ್ ನೇತೃತ್ವದ ಸರ್ಕಾರ ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದೆ.