ಬೆಂಗಳೂರು: ಒಂದು ನಿವೇಶನಕ್ಕಾಗಿ ಸೋದರರು ಮಚ್ಚು, ದೊಣ್ಣೆಗಳಿಂದ ಹೊಡೆದಾಡಿಕೊಂಡ ಘಟನೆ ಬೆಂಗಳೂರಿನ ಹೊರವಲಯದ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ ನಾರಾಯಣಪುರದಲ್ಲಿ ನಡೆದಿದೆ.
ಕೆ. ನಾರಾಯಣಪುರದ ನಿವಾಸಿಗಳಾದ ರಾಮಪ್ಪ ಮತ್ತು ವೆಂಕಟಪ್ಪ ಎಂಬ ಸೋದರರ ಹೆಸರಲ್ಲಿ ಒಂದು ನಿವೇಶನವಿತ್ತು. ಇಬ್ಬರ ಪಾಲು ಬೇರೆಯಾಗಿರಲಿಲ್ಲ. ವೆಂಕಟಪ್ಪ ಅಕಾಲಿಕ ಮರಣ ಹೊಂದುತ್ತಲೇ ರಾಮಪ್ಪ ಯಾರಿಗೂ ತಿಳಿಯದಂತೆ ನಿವೇಶನವನ್ನು ಉದಯ್ ಎಂಬವರಿಗೆ ಮಾರಿದ್ದಾನೆ. ಸೈಟ್ ಖರೀದಿಸಿದ ಉದಯ್ ನಿವೇಶನದಲ್ಲಿ ಮನೆ ಕಟ್ಟಲು ಮುಂದಾಗುತ್ತಿದ್ದಂತೆ ವಿಷಯ ವೆಂಕಟಪ್ಪನ ಮಕ್ಕಳಿಗೆ ಗೊತ್ತಾಗಿದೆ.
ಉದಯ್ ಮನೆ ಕಟ್ಟುತ್ತಿದ್ದ ಸ್ಥಳಕ್ಕೆ ಬಂದ ವೆಂಕಟಪ್ಪನ ಮಕ್ಕಳು ಜಗಳ ಆರಂಭಿಸಿದ್ದಾರೆ. ಇತ್ತ ರಾಮಪ್ಪ ಸಹ ತನ್ನ ಮಕ್ಕಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾನೆ. ಆರಂಭದಲ್ಲಿ ಮಾತಿನಲ್ಲಿ ಆರಂಭವಾದ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಎರಡು ಕುಟುಂಬದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರು, ಕೈಗೆ ಸಿಕ್ಕ ಕಲ್ಲು, ದೊಣ್ಣೆಗಳಿಂದ ಅದೇ ಸೈಟ್ ಜಾಗದಲ್ಲಿ ಪರಸ್ಪರ ಹೊಡೆದಾಡಿದ್ದಾರೆ. ಈ ಗಲಾಟೆಯಲ್ಲಿ ಐವರಿಗೆ ಗಾಯವಾಗಿದ್ದು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಎರಡು ಕಡೆಯವರು ಮಹದೇವಪುರ ಪೋಲಿಸ್ ಠಾಣಾ ಮೆಟ್ಟಿಲು ಏರಿದ್ದು ಪರಸ್ಪರ ಒಬ್ಬರ ವಿರುದ್ಧ ಮತ್ತೊಬ್ಬರು ದೂರು ದಾಖಲಿಸಿದ್ದಾರೆ.
https://www.youtube.com/watch?v=F3Xh0bhDanI
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv