ಕಾಂತಾರ (Kantara) ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಬರುವ ವರಾಹ ರೂಪಂ ಮ್ಯೂಸಿಕ್ ನಾವು ಕದ್ದಿಲ್ಲ. ಸುಖಾಸುಮ್ಮನೆ ಜನರನ್ನು ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಯಾರೇ ಕೇಳಿದರೂ, ನಾವು ಅದನ್ನು ಕದ್ದಿಲ್ಲ ಎಂದು ಸಾಬೀತು ಪಡಿಸುತ್ತೇವೆ ಎಂದು ರಿಷಬ್ ಶೆಟ್ಟಿ (Rishabh Shetty) ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಆಗಮಿಸಿದ್ದ ರಿಷಬ್ ಶೆಟ್ಟಿ ದಂಪತಿ, ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾರಣಕ್ಕೂ ಅದು ಕದ್ದ ಮ್ಯೂಸಿಕ್ ಅಲ್ಲ ಎಂದು ನುಡಿದಿದ್ದಾರೆ.
ಕಾಂತಾರ ಸಿನಿಮಾ ಅಂದಾಕ್ಷಣ ಥಟ್ಟನೆ ನೆನಪಾಗುವ ಹಾಡು ‘ವರಾಹ ರೂಪಂ’ (Varaha Rupam) ಗೀತೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಈ ಗೀತೆಯು ಸಿನಿಮಾದ ಗಟ್ಟಿತನವನ್ನು ಮತ್ತಷ್ಟು ಹೆಚ್ಚಿಸಿತ್ತು. ಕ್ಲೈಮ್ಯಾಕ್ಸ್ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಲು ಕಾರಣವೂ ಆಗಿತ್ತು. ಈ ಹಾಡಿನ ವಿರುದ್ಧ ಟ್ಯೂನ್ ಕದ್ದ ಆರೋಪ ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ನ ಸದಸ್ಯರು ಕೋರ್ಟಿಗೆ ಮೊರೆ ಹೋಗಿದ್ದರು. ಹಾಗಾಗಿ ಕೋಯಿಕ್ಕೋಡ್ ಕೋರ್ಟ್ ಸಿನಿಮಾದಲ್ಲಿ ಈ ಹಾಡು ಬಳಸದಂತೆ ತಡೆಯಾಜ್ಞೆ ನೀಡಿತ್ತು.
ಆದರೂ, ಕಾಂತರ ಸಿನಿಮಾದ ತಂಡ ನಾವು ಯಾವುದೇ ರೀತಿಯಲ್ಲಿ ಹಾಡನ್ನು ಕಾಪಿ ಮಾಡಿಲ್ಲ. ಹಾಗಾಗಿ ಚಿತ್ರದಲ್ಲಿ ಆ ಹಾಡು ಇರತ್ತೆ ಎಂದು ಈವರೆಗೂ ಥಿಯೇಟರ್ ನಲ್ಲಿ ಅದನ್ನು ಮುಂದುವರೆಸಿಕೊಂಡು ಬಂದಿದ್ದರು. ಇದೀಗ ಮತ್ತೊಂದು ಕೇಸ್ ದಾಖಲಾಗಿದ್ದು, ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯು ಮತ್ತೆ ಕೋರ್ಟ್ ಮೊರೆ ಹೋಗಿದೆ. ಹಾಗಾಗಿ ಅರ್ಜಿಯ ವಿಚಾರಣೆ ನಡೆಸಿರುವ ಪಾಲಕ್ಕಾಡ್ ಕೋರ್ಟ್ (Palakkad Court) ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ ಎಂದು ತಡೆಯಾಜ್ಞೆ (Injunction) ನೀಡಿದೆ.
ಇನ್ನೂ ಕೋರ್ಟ್ ಆದೇಶದ ಪ್ರತಿ ಚಿತ್ರತಂಡಕ್ಕೆ ಸಿಗದೇ ಇರುವ ಕಾರಣದಿಂದಾಗಿ ಥಿಯೇಟರ್ ನಲ್ಲಿ ಈ ಹಾಡು ಕೇಳಿ ಬರುತ್ತಿದೆ. ಆದೇಶ ಪ್ರತಿ ಸಿಕ್ಕ ನಂತರ ಯಾವ ನಿರ್ಧಾರ ತಗೆದುಕೊಳ್ಳುತ್ತಾರೋ ಕಾದು ನೋಡಬೇಕು. ಅಷ್ಟೇ ಅಲ್ಲದೇ, ಮೊನ್ನೆಯಷ್ಟೇ ಬ್ಯಾಂಡ್ ನ ಸದಸ್ಯರೊಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡು, ‘ಕ್ರೆಡಿಟ್ ಕೊಟ್ಟು ಈ ಹಾಡನ್ನು ಬಳಸಿಕೊಳ್ಳಬಹುದು ಎಂದು ಹೇಳಿದ್ದರು. ಆದರೆ, ಮ್ಯೂಸಿಕ್ ಸಂಸ್ಥೆ ಆ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ.
ಎರಡೆರಡು ಕೋರ್ಟಿನಿಂದ ಈ ಹಾಡಿಗೆ ತಡೆಯಾಜ್ಞೆ ನೀಡಿದೆ. ಆದರೂ, ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಈ ಸಿನಿಮಾ ಪ್ರದರ್ಶನವಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋರ್ಟ್ ಮಾತಿಗೆ ಚಿತ್ರತಂಡ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತದೆಯೋ ಕಾದು ನೋಡಬೇಕು. ಅಷ್ಟರಲ್ಲಿ ಸಂಧಾನ ಏನಾದರೂ ನಡೆದರೂ ಅಚ್ಚರಿ ಪಡಬೇಕಿಲ್ಲ.