– ಶೋಲೆ ಸಿನಿಮಾದಿಂದ ಪ್ರೇರಣೆ
ಲಕ್ನೋ: ಕಂಠಪೂರ್ತಿ ಮದ್ಯ ಕುಡಿದು ವಾಟರ್ ಟ್ಯಾಂಕ್ ಮೇಲೆ ಹೋಗಿ ನಾನು ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದು ಕುಡುಕನೋರ್ವ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶ ಅಲಿಗರ್ ಪ್ರದೇಶದಲ್ಲಿ ನಡೆದಿದೆ.
ಸುಮಾರು 40 ದಿನಗಳ ನಂತರ ಮದ್ಯದಂಗಡಿಗಳು ಓಪನ್ ಆಗಿರುವುದು ಮದ್ಯಪ್ರಿಯರಿಗೆ ಬಿಡುಗಡೆ ಸಿಕ್ಕಿದಂತೆ ಆಗಿದೆ. ಅಂತೆಯೇ ಉತ್ತರ ಪ್ರದೇಶದಲ್ಲಿ ಮದ್ಯಪಾನ ಮಾಡಿದ ಕುಡುಕನೋರ್ವ ಶೋಲೆ ಸಿನಿಮಾದಿಂದ ಪ್ರೇರಣೆ ಪಡೆದು ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿದ್ದಾನೆ. ಕುಡುಕನನ್ನು ಶಶಿ ಎಂದು ಗುರುತಿಸಲಾಗಿದೆ.
ಮದ್ಯಪಾನ ಮಾಡಿ ಬಂದ ಶಶಿ, ನಗರದ ದೊಡ್ಡ ವಾಟರ್ ಟ್ಯಾಂಕ್ ಮೇಲೆ ಹೋಗಿ ನಾನು ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸ್ಥಳೀಯರು ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಪೊಲೀಸರು ಮತ್ತು ಮಾಜಿ ಬಿಜೆಪಿ ಮೇಯರ್ ಆದ ಶಕುಂತಲ ಭಾರತಿ ಬಂದು ಆತನ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಮಾಜಿ ಮೇಯರ್ ಮತ್ತು ಪೊಲೀಸರು ಎಷ್ಟೇ ಕೇಳಿಕೊಂಡರೂ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶಶಿ ಬೆದರಿಕೆ ಹಾಕಿದ್ದಾನೆ.
ಪೊಲೀಸರು ಮೈಕ್ ಹಿಡಿದು ಆತನನ್ನು ಮನವೊಲಿಸಿದ್ದಾರೆ. ಆತನನ್ನು ಕರೆತರಲು ಮೇಲೆ ಹೋದರೆ ಅದೇ ಭಯದಲ್ಲಿ ಅವನು ಮೇಲಿಂದ ಜಿಗಿದು ಬೀಡುತ್ತಾನೆ ಎಂಬ ಭಯದಿಂದ ಪೊಲೀಸರು ಮೇಲೆ ಹೋಗದೆ ಕೆಳಗೆ ನಿಂತು ಆತನ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಜೊತೆಗೆ ನಿನ್ನ ಪ್ರೀತಿಯಿಂದ ಕಾಣುವ ಪತ್ನಿ ನಿನಗಾಗಿ ಕಾಯುತ್ತಿದ್ದಾರೆ. ನೀನು ಆತ್ಮಹತ್ಯೆ ಮಾಡಿಕೊಂಡರೆ ಅವರು ಸಾಯುತ್ತಾರೆ ಎಂದು ಹೇಳಿ ಮನವರಿಕೆ ಮಾಡಿ ಕೊನೆಗೆ ಕೆಳಗೆ ಇಳಿಸಿದ್ದಾರೆ.
ಕೆಳಗೆ ಬಂದ ಶಶಿಯನ್ನು ಪೊಲೀಸರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಎಣ್ಣೆ ಕಿಕ್ ಇಳಿದ ಬಳಿಕ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಆತ ನಾನು ಮದ್ಯಪಾನ ಮಾಡಿದ ನಂತರ ನಾನು ಶೋಲೆ ಸಿನಿಮಾದ ಧರ್ಮೇಂದ್ರನಂತೆ ಭಾಸವಾಗಿತು. ನಾನು ಸೂಸೈಡ್ ಮಾಡಿಕೊಳ್ಳಲು ಹೋದಾಗ ನನ್ನ ಹೆಂಡತಿ ಬಂದು ಕಾಪಾಡುತ್ತಾಳೆ ಎಂದು ನಾನು ಹಾಗೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ.