ಲಕ್ನೋ: ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿಲ್ಲದೆ ಇರುವುದನ್ನು ನೋಡಿ ಆಶ್ಚರ್ಯವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬಿಎಸ್ಪಿ ಕಡಿಮೆ ಪ್ರಚಾರ ಮಾಡುತ್ತಿರುವುದರ ಕುರಿತು ಮಾಧ್ಯಮಗಳು ಪ್ರಶ್ನೆ ಕೇಳಿದಕ್ಕೆ ಉತ್ತರಿಸಿದ ಅವರು, ಈ ವಿಷಯ ತಿಳಿದ ನನಗೂ ಆಶ್ಚರ್ಯವಾಗಿದೆ. ಚುನಾವಣೆಗೆ ಸ್ವಲ್ಪದಿನಗಳಿದ್ದರೂ ಅವರ ಪ್ರಚಾರವು ನಿರೀಕ್ಷಿತ ವೇಗವನ್ನು ಪಡೆದಿಲ್ಲ. ಮಾಯಾವತಿ ಅವರು ತಮ್ಮ ಹಿಂದಿನ ಶೈಲಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿಲ್ಲ. ಅದು ಅಲ್ಲದೇ ಪ್ರಚಾರದ ವಿಷಯದಲ್ಲಿ ಅವರು ಮೌನವಾಗಿದ್ದಾರೆ ಎಂದರು. ಇದನ್ನೂ ಓದಿ: ಉಡುಪಿಯ ಕಾಂಗ್ರೆಸ್ ನಾಯಕಿಗೆ ಚಾಕು ಇರಿತ
ಆರು-ಏಳು ತಿಂಗಳಿಂದ ಮಾಯಾವತಿ ಅವರು ಪಕ್ಷದಲ್ಲಿ ಸಕ್ರಿಯವಾಗಿಲ್ಲ. ಬಹುಶಃ ಅವರು ಚುನಾವಣೆ ಹತ್ತಿರ ಬಂದಾಗ ಸಕ್ರಿಯರಾಗುತ್ತಾರೆ ಎಂದು ನಾವು ಭಾವಿಸಿದ್ದೇವೆ. ಚುನಾವಣೆ ಪ್ರಚಾರ ಎಲ್ಲಕಡೆ ಪ್ರಾರಂಭವಾಗಿದೆ. ನಾವು ಚುನಾವಣೆಯ ಮಧ್ಯದಲ್ಲಿದ್ದೇವೆ. ಆದರೆ ಇನ್ನೂ ಬಿಎಸ್ಪಿ ಪ್ರಚಾರವನ್ನು ಮಾಡುತ್ತಿಲ್ಲ. ನೀವು ಹೇಳಿದಂತೆ, ಅವರು ತುಂಬಾ ಶಾಂತವಾಗಿದ್ದಾರೆ. ನನಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಪ್ರಸ್ತುತ ನಾನು ಅಸ್ಸಾಂ ಮತ್ತು ಗೋವಾದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ನನ್ನ ಪಕ್ಷ ನನಗೆ ಎಲ್ಲಿ ಪ್ರಚಾರ ಮಾಡು ಎಂದು ಹೇಳುತ್ತೆ, ಅಲ್ಲಿ ಹೋಗಿ ನಾನು ಪ್ರಚಾರ ಮಾಡುತ್ತೇನೆ. ನಾನು ಬೇರೆ ರಾಜ್ಯಗಳ ಬಗ್ಗೆ ಮಾತನಾಡಲಾರೆ. ಕಾಂಗ್ರೆಸ್ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಅದೇ ರೀತಿ ತೆಗೆದುಕೊಳ್ಳುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ದುಡಿದ ಹಣವನ್ನ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಮುಡಿಪಾಗಿಟ್ಟ ಆಟೋ ಚಾಲಕ
ಯುಪಿಯಲ್ಲಿ ಕಾಂಗ್ರೆಸ್ನ ಮೈತ್ರಿ ಮಾತುಕತೆ ಕುರಿತು ಮಾತನಾಡಿದ ಅವರು, ನಾನು ಉತ್ತರ ಪ್ರದೇಶದ ಪರವಾಗಿ ಮಾತನಾಡಬಲ್ಲೆ. ನಾವು ಯುಪಿಯಲ್ಲಿ ಈ ಹಿಂದೆ ಮೈತ್ರಿ ಪ್ರಯೋಗ ಮಾಡಿದ್ದೇವೆ. ನಾವು 2017 ರಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಅದಕ್ಕೂ ಮೊದಲು ನಾವು ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಹಾಗಾಗಿ ಉತ್ತರ ಪ್ರದೇಶದಲ್ಲಿ ಇದು ನಮ್ಮ ಹಾದಿಯಾಗಿದೆ ಎಂದು ವಿವರಿಸಿದರು.
ಉತ್ತರ ಪ್ರದೇಶಕ್ಕೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.