ವಾರಾಣಾಸಿ: ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರನ್ನು ಪುಂಡರು ಚುಡಾಯಿಸಿದ ಘಟನೆ ಉತ್ತರ ಪ್ರದೇಶದ ಅರೋಯ್ ಮತ್ತು ಮಿರ್ಜಾಮುರದ್ ನಡುವೆ ನಡೆದಿದೆ.
ಕಳೆದ ಸೋಮವಾರ ರಾತ್ರಿ ಕೇಂದ್ರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾದ ಅನುಪ್ರಿಯಾ ಪಟೇಲ್ರವರು ಕಾಶಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ಸಾಗುತ್ತಿದ್ದರು. ಈ ವೇಳೆ ಅರೋಯ್ ಮತ್ತು ಮಿರ್ಜಾಮುರದ್ ನಡುವೆ ಪ್ರಯಾಣಿಸುತ್ತಿದ್ದಾಗ, ನೋಂದಣಿ ಇಲ್ಲದ ಕಾರಿನಲ್ಲಿ ಬಂದ ಮೂವರು ಯುವಕರು ಓವರ್ ಟೇಕ್ ಮಾಡುವ ವೇಳೆ ಸಚಿವೆಗೆ ಅಸಭ್ಯವಾಗಿ ಬೈದಿದ್ದಾರೆ. ಅಲ್ಲದೇ ಭದ್ರತಾ ಸಿಬ್ಬಂದಿಯವರ ಜೊತೆಗೂ ಅಸಭ್ಯ ರೀತಿಯಿಂದ ವರ್ತಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ಕುರಿತು ಸಚಿವೆ ವಾರಣಾಸಿಯ ಎಸ್ಪಿ ಎಸ್ ಕೆ ಭಾರದ್ವಜ್ ಬಳಿ ದೂರು ನೀಡಿದ್ದಾರೆ. ನೋಂದಣಿ ಇಲ್ಲದ ಕಾರನಲ್ಲಿದ್ದ ಆರೋಪಿಗಳನ್ನು ಪತ್ತೆಹಚ್ಚುವಂತೆ ತಿಳಿಸಿದ್ದಾರೆ. ಕೂಡಲೇ ಜಾಗೃತರಾದ ಮಿರ್ಜಾಪುರದ್ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇಂದ್ರದ ಸಚಿವೆಯರಿಗೆ ಚುಡಾಯಿಸುತ್ತಿರುವುದು ಇದೇ ಮೊದಲೆನಲ್ಲ. ಈ ಏಪ್ರಿಲ್ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರಿಗೂ ಇಂತಹುದೆ ಅನುಭವವಾಗಿತ್ತು. ದೆಹಲಿ ವಿಮಾನ ನಿಲ್ದಾಣದಿಂದ ಮನೆಗೆ ಬರುವಾಗ ಕಾರಿನಲ್ಲಿದ್ದ ಯುವತಿ ಮತ್ತು ಮೂವರು ಯುವಕರು ರೇಗಿಸಿದ್ದರು.