ಹಾಸನ: ಜಿಲ್ಲೆಯಲ್ಲಿ ಕಳೆದ 12 ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ. ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಸತತ 4 ದಿನ ಸಕಲೇಶಪುರ, ಆಲೂರು ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮಳೆಯಿಂದ ಅನೇಕ ಅವಘಡಗಳು ಸಂಭವಿಸಿವೆ. ನೂರಾರು ಮನೆಗಳು ಕುಸಿದು ಬಿದ್ದಿದ್ದರೆ, ಸೇತುವೆ, ರಸ್ತೆಗಳು ಕೊಚ್ಚಿ ಹೋಗಿವೆ. ಹೊಲ, ಗದ್ದೆ, ತೋಟಗಳು ಜಲಾವೃತವಾಗಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇದುವರೆಗೂ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ಆದರೆ ಇಂದು ಮಧ್ಯಾಹ್ನ ಮಹಾಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಇದನ್ನೂ ಓದಿ: ಇಂಧನ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಕರೆಂಟ್ ನಾಪತ್ತೆ – ವಿದ್ಯುತ್ ಇಲ್ಲದೆ ಪರದಾಡಿದ ಸುಳ್ಯದ ಜನತೆ
ಮೀನು ಹಿಡಿಯಲು ಹೋದ ವೇಳೆ ತೆಪ್ಪ ಮಗುಚಿ ಇಬ್ಬರು ಜಲಸಮಾಧಿಯಾಗಿದ್ದರೆ, ಓರ್ವ ಈಜಿ ದಡ ಸೇರಿ ಪಾರಾಗಿರುವ ಘಟನೆ ಹಾಸನ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ನಡೆದಿದೆ. ತಿಮ್ಲಾಪುರ ಕೆರೆಯಲ್ಲಿ ಕಿಶೋರ್ ಮೀನುಗಳನ್ನು ಸಾಕಿದ್ದರು. ಮೀನುಗಳು ದೊಡ್ಡದಾಗಿದ್ದು, ಅವುಗಳನ್ನು ಹಿಡಿದು ಮಾರಾಟ ಮಾಡಲು ಮೂವರು ತೆಪ್ಪದಲ್ಲಿ ತೆರಳಿದ್ದರು. ಈ ವೇಳೆ ಭಾರೀ ಮಳೆ, ಗಾಳಿಯಿಂದ ಕೆರೆಯ ಮಧ್ಯದಲ್ಲಿ ತೆಪ್ಪ ಮಗುಚಿ ಬಿದ್ದಿದ್ದು, ನೀರಲ್ಲಿ ಮುಳುಗಿ ಕಿಶೋರ್(38) ಮತ್ತು ರಾಜಣ್ಣ(50) ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಹಿಜಬ್ ಕಿಚ್ಚು – ವಿವಾದಿತ ವಿದ್ಯಾರ್ಥಿನಿಯರ ಮೂಲಕ CFI ಗರ್ಲ್ಸ್ ಕಾನ್ಫರೆನ್ಸ್
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಕಾರ್ಯಾಚರಣೆ ನಡೆಸಿ, ಕಿಶೋರ್ ಮೃತದೇಹ ಹೊರತೆಗೆದಿದ್ದಾರೆ. 3 ಗಂಟೆಗಳ ಕಾರ್ಯಾಚರಣೆಯ ಬಳಿಕ ಅಗ್ನಿಶಾಮಕ ಸಿಬ್ಬಂದಿ ರಾಜಣ್ಣನ ಮೃತದೇಹವನ್ನು ಹೊರತೆಗೆದಿದ್ದಾರೆ. ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.