ಬೆಂಗಳೂರು: ರಾಜ್ಯದಲ್ಲಿಯೇ ದೊಡ್ಡ ಸುದ್ದಿಯಾಗಿರೋ ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ಮುಂದೆ ನಾಲ್ವರು ತಪ್ಪೊಪ್ಪಿಕೊಂಡಿದ್ದಾರೆ.
‘ಅವರು’ ಹೇಳಿದಂತೆ ನಾವು ಕೆಲಸ ಮಾಡುತ್ತಾ ಇದ್ದೇವೆ. ನಾವು ಡೇಟಾ (Data) ಸಂಗ್ರಹಿಸಿದ್ದು, ಮಾರಾಟ ಮಾಡಿದ್ದು ನಿಜ. ಆರ್ಓ ಚಂದ್ರಶೇಖರ್ ಹೇಳಿದಂತೆ ಕೇಳುತ್ತಾ ಇದ್ದೆವು. ಅವರೇ ನಮಗೆಲ್ಲಾ ಸೂತ್ರಧಾರಿ ಎಂದು ಬಾಯ್ಬಿಟ್ಟಿದ್ದಾರೆ.
ಮಹದೇವಪುರ ವಲಯದಲ್ಲಿ ಮಾಹಿತಿಯನ್ನು ಕಲೆ ಹಾಕಿದ್ದೀವಿ. ಮಾಹಿತಿಯನ್ನು ಆರ್ ಓಗೆ ನೀಡಿ ಹಣವನ್ನು ಪಡೆದುಕೊಂಡಿದ್ದೇವೆ ಎಂದು ರೇಣುಕಾಪ್ರಸಾದ್, ಧರ್ಮೇಶ್ ಸೇರಿ ನಾಲ್ವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಗೋಲ್ಮಾಲ್ – ಚಿಲುಮೆ ಸಂಸ್ಥೆಯ ನಾಲ್ವರು ಪೊಲೀಸರ ವಶಕ್ಕೆ
ಇತ್ತ ಪ್ರಕರಣ ಸಂಬಂಧ ಪ್ರಕರಣದ ತನಿಖೆಯ ಮೇಲೆ ಚುನಾವಣಾ ಆಯೋಗ (Election Commission) ನಿಗಾ ಇಟ್ಟಿದೆ. ಯಾವುದೇ ಕಾರಣಕ್ಕೂ ಮಾಹಿತಿ ಟ್ಯಾಂಪರಿಂಗ್ ಆಗದಂತೆ ಎಚ್ಚರ ವಹಿಸಲು ಚುನಾವಣಾ ಆಯೋಗವು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ತನಿಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರತಿಯೊಂದನ್ನು ವೀಡಿಯೋ ಮಾಡುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಕಂಪ್ಯೂಟರ್ ಮತ್ತು ದಾಖಲೆ ವಶಕ್ಕೆ ತೆಗೆದುಕೊಳ್ಳುವ ಪೊಲೀಸರಿಂದ ವಿಡಿಯೋ ರೆಕಾರ್ಡ್ ಮಾಡಲಾಗುತ್ತಿದೆ.