ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ತಡರಾತ್ರಿ ಅಬ್ಬರಿಸಿದ ವರುಣಾರ್ಭಟಕ್ಕೆ ಮರವೊಂದು ಮುರಿದು ಬಿದ್ದ ಪರಿಣಾಮ ಗೃಹಿಣಿ ದಾರುಣವಾಗಿ ಮೃತಪಟ್ಟಿದ್ದಾರೆ.
ರಿಯಾನತ್ (23) ಮೃತ ದುರ್ದೈವಿ. ವಿರಾಜ್ಪೇಟೆ ತಾಲೂಕಿನ ಪಾಲಿಬೆಟ್ಟದ ತಾರಿಕಟ್ಟೆ ಎಂಬಲ್ಲಿ ಮಧ್ಯರಾತ್ರಿ ಬಿರುಗಾಳಿ ಸಹಿತ ಮಳೆ ಸುರಿದಿದೆ. ಈ ವೇಳೆ ಮನೆ ಬಳಿ ಇದ್ದ ಭಾರೀ ಗಾತ್ರದ ಮರವೊಂದು ಮನೆ ಮೇಲೆ ಬಿದ್ದಿದ್ದರಿಂದ ಮನೆಯಲ್ಲಿ ಮಲಗಿದ್ದ ರಿಯಾನತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಿಯಾನತ್ ಪಕ್ಕದಲ್ಲೇ ಮಲಗಿದ್ದ ಎರಡು ವರ್ಷದ ಮಗು ನಸತ್ ಹಾಗೂ ತಾಯಿ ನೌಷದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಬಳಿಯಿದ್ದ ಮರವನ್ನು ತೆರವುಗೊಳಿಸುವಂತೆ ಹಲವು ತಿಂಗಳಿನಿಂದ ದೇವರಪುರ ಗ್ರಾಮ ಪಂಚಾಯ್ತಿಗೆ ಸಾಕಷ್ಟು ಬಾರಿ ದೂರು ನೀಡಲಾಗಿತ್ತು. ಆದರೆ ಮರ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದೇ ಅನಾಹುತಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೊಡಗು ಜಿಲ್ಲೆಯ ಕೆಲವೆಡೆ ವರುಣನ ಅಬ್ಬರ ಜೋರಾಗಿತ್ತು. ಗುಡುಗು ಸಿಡಿಲಿನೊಂದಿಗೆ ವರುಣ ಅಬ್ಬರಿಸಿದ್ದಾನೆ. ದಿಢೀರ್ ಆಗಿ ಸುರಿದ ಮಳೆಗೆ ದ್ವಿಚಕ್ರ ವಾಹನ ಸವಾರರ ಪರದಾಡುವಂತಾಯಿತು. ಮಡಿಕೇರಿ ನಗರ ಸೇರಿದಂತೆ ವಿವಿಧೆಡೆ ವರುಣನ ಅಬ್ಬರ ಜೋರಾಗಿತ್ತು.