ಹೈದರಾಬಾದ್: ಅತ್ತ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಸರಿಲೇರು ನೀಕೆವ್ವರು’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಇತ್ತ ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದ ಮಹೇಶ್ ಬಾಬುಗೆ ನೋವೊಂದು ಕಾಡುತ್ತಿದೆ.
ಸದ್ಯ ಮಹೇಶ್ ಬಾಬು ಅವರು ಕುಟುಂಬದ ಜೊತೆ ಯುಎಸ್ಎ ತೆರಳಿದ್ದಾರೆ. ಆದರೆ ಅವರು ಜಾಲಿ ಟ್ರಿಪ್ಗೆ ಯುಎಸ್ಎಗೆ ಹೋಗಿಲ್ಲ, ಬದಲಾಗಿ ಯುಎಸ್ಎಯಲ್ಲಿ ಮೊಣಕಾಲಿನ ಸರ್ಜರಿಗೆ ಒಳಗಾಗಲಿದ್ದಾರೆ ಎನ್ನಲಾಗುತ್ತಿದೆ.
ಕಳೆದ 7 ವರ್ಷಗಳಿಂದ ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿರುವ ಪ್ರಿನ್ಸ್ ಮಹೇಶ್ ಬಾಬುಗೆ ಯುಎಸ್ಎಯಲ್ಲಿ ಮೊಣಕಾಲಿನ ಸರ್ಜರಿ ನಡೆಯಲಿದೆ. ಆದರೆ ‘ಸರಿಲೇರು ನೀಕೆವ್ವರು’ ಸಿನಿಮಾ ಸಕ್ಸಸ್ನ ಖುಷಿಯಲ್ಲಿದ್ದ ಮಹೇಶ್ ಬಾಬು ದಿಢೀರನೆ ಸರ್ಜರಿಗೆ ಒಳಗಾಗುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.
2014ರಲ್ಲಿ ‘ಆಗಡು’ ಸಿನಿಮಾ ಶೂಟಿಂಗ್ ವೇಳೆ ಮಹೇಶ್ ಬಾಬು ಕಾಲಿಗೆ ಪೆಟ್ಟಾಗಿತ್ತು. ಇದರಿಂದ ಅವರು ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಕರ್ನಾಟಕದ ಬಳ್ಳಾರಿಯಲ್ಲಿ ಆಗಡು ಚಿತ್ರದ ಟೈಟಲ್ ಟ್ರ್ಯಾಕ್ ಶೂಟಿಂಗ್ ನಡೆಯುತ್ತಿದ್ದಾಗ ಮಹೇಶ್ ಬಾಬು ಮೊಣಕಾಲಿಗೆ ತೀವ್ರ ಪೆಟ್ಟಾಗಿತ್ತು. ಅಂದಿನಿಂದ ನೋವಿನಲ್ಲಿ ಬಳಲುತ್ತಿದ್ದ ಮಹೇಶ್ ಈಗ ಚಿಕಿತ್ಸೆಗೆ ಒಳಗಾಗಿದ್ದಾರೆ. ಒಂದರ ಹಿಂದೆ ಒಂದು ಸಾಲಾಗಿ ಶೂಟಿಂಗ್ನಲ್ಲಿ ಬ್ಯುಸಿಯಿದ್ದ ಮಹೇಶ್ ಅವರು ಚಿಕಿತ್ಸೆಯನ್ನು ಮುಂದೂಡುತ್ತಲೆ ಬಂದಿದ್ದರು. ಆದರೆ ಈಗ ಸಿನಿಮಾದಿಂದ ಕೊಂಚ ಬ್ರೇಕ್ ಪಡೆದು ಮಹೇಶ್ ಮೊಣಕಾಲು ನೋವಿಗೆ ಚಿಕಿತ್ಸೆ ಪಡೆಯಲು ಯುಎಸ್ಎಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
‘ಸ್ಪೈಡರ್’ ಸಿನಿಮಾದ ಬಳಿಕ ಪ್ರಿನ್ಸ್ ಚಿಕಿತ್ಸೆಗೆ ಒಳಗಾಗಬೇಕಿತ್ತು. ಚಿಕಿತ್ಸೆಗಾಗಿ ದೀರ್ಘಕಾಲ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ ಎಂದು ಚಿಕಿತ್ಸೆಯನ್ನು ಮುಂದೂಡಿದ್ದರು. ಆದರೇ ಇತ್ತೀಚಿಗೆ ಅವರಿಗೆ ಮೊಣಕಾಲು ನೋವು ಹೆಚ್ಚಾಗಿದ್ದು, ‘ಸರಿಲೇರು ನೀಕೆವ್ವರು’ ಸಿನಿಮಾದ ಎಲ್ಲಾ ಕೆಲಸಗಳನ್ನು ಮುಗಿಸಿ ಮಹೇಶ್ ಯುಎಸ್ ಎಗೆ ಚಿಕಿತ್ಸೆಗಾಗಿ ತೆರಳಿದ್ದಾರೆ.
ಈ ತಿಂಗಳ ಕೊನೆಯಲ್ಲಿ ಅವರು ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಯಾವ ಆಸ್ಪತ್ರೆ? ಯಾವ ದಿನ ಎನ್ನುವ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಶಸ್ತ್ರಚಿಕಿತ್ಸೆ ನಂತರ ಮಹೇಶ್ ಮೂರರಿಂದ ಐದು ತಿಂಗಳು ಸಂಪೂರ್ಣ ರೆಸ್ಟ್ ನಲ್ಲಿ ಇರಲಿದ್ದಾರೆ. ಆ ನಂತರ ‘ಮಹರ್ಶಿ’ ಚಿತ್ರದ ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ಮತ್ತೆ ಸಿನಿಮಾ ಮಾಡಲಿದ್ದಾರೆ.