ಬೆಂಗಳೂರು: ಪ್ರಸಾದಕ್ಕೆ ವಿಷವನ್ನು ಬೆರೆಸಿದ ಪ್ರಕರಣದಿಂದ ಎಚ್ಚರಗೊಂಡಿರುವ ಮುಜರಾಯಿ ಇಲಾಖೆ ಪ್ರಸಾದ ವಿತರಣೆಗೆ ನಾನಾ ರೂಲ್ಸ್ ತಂದಿದೆ. ಇಂದು ಹಾಗೂ ನಾಳೆ ನಾನಾ ಕಡೆ ವೈಕುಂಠ ಏಕಾದಶಿಗೆ ಲಡ್ಡು ತಯಾರಿಸುವ ಸ್ಥಳ, ಹಾಗೂ ನಾಳೆ ಲಡ್ಡು ವಿತರಣೆಯ ಸಮಯದಲ್ಲಿ ದೇಗುಲಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಮುಜರಾಯಿ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲಿಸಲಿದ್ದಾರೆ. ಇದನ್ನೂ ಓದಿ: ಸುಳ್ವಾಡಿ ದುರಂತದ ಬಳಿಕ ಎಚ್ಚೆತ್ತ ಮುಜರಾಯಿ ಇಲಾಖೆ! – ಆದೇಶದಲ್ಲಿ ಏನಿದೆ?
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕು ತಹಶೀಲ್ದಾರ್, ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇಗುಲಕ್ಕೆ ಭೇಟಿ ನೀಡಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ನೆಲಮಂಗಲದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿವೆಂಕಟರಮಣ ದೇಗುಲಕ್ಕೆ ತಹಶಿಲ್ದಾರ್ ಕೆ.ಎನ್ ರಾಜಶೇಖರ್ ಲಡ್ಡು ತಯಾರಿಕೆ ವೇಳೆ ಭೇಟಿ ನೀಡಿ, ಲಡ್ಡು ತಯಾರಿಸುವಾಗ ಎಚ್ಚರ ವಹಿಸುವಂತೆ ಮುಜುರಾಯಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಸಿದ್ದಾರೆ. ದೇವಸ್ಥಾನದ ಪ್ರಸಾದ ತಯಾರಿಕಾ ಕೊಠಡಿಗೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ಆದೇಶ ಮಾಡಿದ್ದಾರೆ.
ಇಂದು ವೈಕುಂಠ ಏಕಾದಶಿಯ ಪ್ರಯುಕ್ತ ಬರುವ ಭಕ್ತಾಧಿಗಳಿಗೆ ಈ ದೇವಾಲಯದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಲಡ್ಡುಗಳನ್ನ ಸಿದ್ಧಪಡಿಸಿಕೊಳ್ಳಲಾಗಿದೆ. ಇಲ್ಲಿನ ದೇವರಿಗೂ ತಿರುಪತಿಯ ತಿರುಮಲದಲ್ಲಿ ಮಾಡುವಂತಹ ಅಲಂಕಾರವನ್ನ ಮಾಡಲಾಗುತ್ತಿದೆ. ಹೀಗಾಗಿ ಪ್ರಾಚೀನ ಕಾಲದ ಇತಿಹಾಸವಿರುವ ಸುಪ್ರಸಿದ್ಧ ಈ ದೇವಾಲಯಲ್ಲಿ, ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆಯನ್ನ ವಹಿಸಿದ್ದಾರೆ.
ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ನಾನಾ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಲಿದೆ. ಇಸ್ಕಾನ್ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಪೂಜೆ ಶುರುವಾಗಿದ್ದು, ಚುಮು ಚುಮು ಚಳಿಯಲ್ಲಿ ಮುಂಜಾನೆಯಿಂದಲೇ ದೇಗುಲಕ್ಕೆ ಭಕ್ತರು ಬರುತ್ತಿದ್ದಾರೆ. ಭಕ್ತರಿಗೆ ವೈಕುಂಠ ದ್ವಾರ ಪ್ರವೇಶಕ್ಕೆ ಎಲ್ಲಾ ವ್ಯವಸ್ಥೆಗಳ ಸಿದ್ಧತೆ ಮಾಡಲಾಗಿದ್ದು, ಸರದಿ ಸುಗಮವಾಗಿ ಸಾಗಲು ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv