ಬೆಂಗಳೂರು: ಇಂದು ನಟ ಸೃಜನ್ ಲೋಕೇಶ್ 38ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಸೃಜನ್ ಮತ್ತು ಪತ್ನಿ ಗ್ರೀಷ್ಮಾ ಧನ್ವಂತರಿ ಹೋಮವನ್ನು ಮಾಡಿದ್ದಾರೆ. ಈ ಹೋಮದಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಪಾಲ್ಗೊಂಡಿದ್ದರು.
ಈ ಹಿಂದೆ ಈ ದೇವಸ್ಥಾನಕ್ಕೆ ಸೃಜನ್ ಬಂದಿದ್ದರು. ಆಗ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಆಗ ಸೃಜನ್ ಬಂಡಿ ಮಹಾಕಾಳಿ ದೇವಸ್ಥಾನದ ಪೂರ್ವ ದಿಕ್ಕಿನ ಮಹಾದ್ವಾರವನ್ನು ಕಟ್ಟಿಸಿಕೊಡುವುದಾಗಿ ಹೇಳಿದ್ದರು. ಅದರಂತೆಯೇ ಇಂದು ಸೃಜನ್ ಹುಟ್ಟುಹಬ್ಬದ ಪ್ರಯುಕ್ತ ದೇವಾಲಯದ ದ್ವಾರದ ಉದ್ಘಾಟನೆಯನ್ನು ಮಾಡಿದ್ದಾರೆ. ವಿಶೇಷ ಎಂದರೆ ಈ ದ್ವಾರಕ್ಕೆ ನಟ ದರ್ಶನ್ ಪೇಂಟಿಂಗ್ ಮಾಡಿಸುವುದಾಗಿ ಒಪ್ಪಿಕೊಂಡಿದ್ದರು. ಅವರು ಕೂಡ ಸೃಜನ್ ಬರ್ತ್ ಡೇ ದಿನದೊಳಗೆ ದ್ವಾರದ ಉದ್ಘಾಟನೆ ಮಾಡಬೇಕು ಅಷ್ಟರಲ್ಲಿ ಬೇಗ ಕೆಲಸ ಮುಗಿಸಬೇಕು ಎಂದು ತಿಳಿಸಿದ್ದರು.
ಹೋಮ ಮಾಡಿ, ದೇವಾಲಯದ ದ್ವಾರವನ್ನು ಉದ್ಘಾಟನೆ ಮಾಡಿ ಬಳಿಕ ಸೃಜ ಮತ್ತು ಗಜ ಎಂಬ ಹೆಸರಲ್ಲಿ ಸಾಂಕೇತಿಕವಾಗಿ ದೇವಸ್ಥಾನದ ಹಿಂಬದಿಯಲ್ಲಿ ಶ್ರೀ ಗಂಧದ ಎರಡು ಗಿಡವನ್ನು ನೆಟ್ಟಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸೃಜನ್, ನನಗೆ ಬಂಡಿ ಮಹಾಕಾಳಿ ದೇವಸ್ಥಾನದ ಮೇಲೆ ತುಂಬಾ ನಂಬಿಕೆ ಇದೆ. ಬಂಡಿ ಮಹಾಕಾಳಿ ದೇವಿಯನ್ನು ನಾನು ನಂಬಿದ್ದೇನೆ. ನಾನು ಅಂದುಕೊಂಡಿದ್ದೆಲ್ಲ ಇಲ್ಲಿ ಬಂದು ಹೋದ ಮೇಲೆ ಸಲೀಸಾಗಿ ಆಗಿದೆ. ಕೆಲ ದಿನದ ಹಿಂದೆ ಬಂದಾಗ ದೇವಸ್ಥಾನದ ನಿರ್ಮಾಣ ಕಾರ್ಯ ನಡೆಯುತಿತ್ತು. ಅವಾಗ ನಾನು ಪೂರ್ವ ದ್ವಾರ ಮಾಡಿಕೊಡುವುದಾಗಿ ಹೇಳಿದ್ದೆ. ಹೀಗಾಗಿ ಈ ಮಹಾತ್ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ.
ದರ್ಶನ್ ಕೂಡ ಇದಕ್ಕೆ ಕೈ ಜೋಡಿಸಿದ್ದು ಬಹಳ ಖುಷಿ ಇದೆ. ದರ್ಶನ್ ಕೂಡ ಈ ದೇವಸ್ಥಾನಕ್ಕೆ ಬಂದರೆ ರಿಫ್ರೆಶ್ ಆಗುತ್ತಾರೆ. ಬರ್ತ್ ಡೇ ಹಿನ್ನೆಲೆಯಲ್ಲಿ ಸುಮಾರು 500 ಗಿಡಗಳನ್ನ ಉಚಿತವಾಗಿ ನೀಡುತ್ತಿದ್ದೇವೆ. ದರ್ಶನ್ ಕೂಡ ಗಿಡಗಳನ್ನು ನೀಡಿದ್ದಾರೆ. ನಗರದಲ್ಲಿ ಮರಗಳು ಕಮ್ಮಿ ಆಗಿದೆ. ಇದರಿಂದ ತುಂಬಾ ಬೇಸರ ಮೂಡಿಸಿದೆ. ಮನೆಗೆ ಹೋದ ಮೇಲೆಯೂ ಅಕ್ಕ ಪಕ್ಕದ ಮನೆಯವರಿಗೆಲ್ಲ ಸ್ವತಃ ನಾವೇ ಹೋಗಿ ಗಿಡಗಳನ್ನ ಹಂಚಲಿದ್ದೇವೆ ಎಂದು ತಿಳಿಸಿದರು.
ಲೋಕೇಶ್ ಪ್ರೊಡಕ್ಷನ್ ನಿಂದ ಈ ವರ್ಷದಿಂದ ಸಾಕಷ್ಟು ಕೆಲಸಗಳು ನಡೆಯಲಿದೆ. ಹೊಸಬರಿಗೆ ಹೆಚ್ಚಿನ ಅವಕಾಶ ಇದೆ. ಹಾಗೆ ಸ್ಟಾರ್ ನಟರ ಸಿನಿಮಾಗಳು ಕೂಡ ಈ ಪ್ರೊಡಕ್ಷನ್ ಹೌಸ್ ನಿಂದ ನಡೆಯಲಿದೆ. ಸದ್ಯದಲ್ಲಿಯೇ ಖಾಸಗಿ ವಾಹಿನಿಯ ಮತ್ತೊಂದು ರಿಯಾಲಿಟಿ ಶೋ ನಡೆಯಲಿದೆ. ಅದರಿಂದ ಸಾಕಷ್ಟು ಜನರಿಗೆ ಸಹಾಯ ಆಗಲಿದೆ. ದರ್ಶನ್ ಜೊತೆ ಸಿನಿಮಾ ಆದಷ್ಟು ಬೇಗ ಮಾಡುತ್ತೇನೆ. ದರ್ಶನ್ ನನ್ನ ಜೋತೆಯಲ್ಲಿ ಇರುವುದೆ ನನ್ನ ಉಡುಗೊರೆ ಎಂದು ಸಂತಸದಿಂದ ಹೇಳಿದರು.
ನನ್ನ ಬಹುವರ್ಷಗಳ ಗೆಳೆಯ, ಟಾಕಿಂಗ್ ಸ್ಟಾರ್ ಸೃಜನ್ ಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲಾ ಈಡೇರಲಿ ????????#HBTalkingStarSuja @srujanlokesh pic.twitter.com/tuJdgPz37B
— Darshan Thoogudeepa (@dasadarshan) June 28, 2018