ಪ್ರೀತಿ ಎಂಬುದು ಮಾಯೆ.. ಈ ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ, ಆದ್ರೆ ಕೆಲವೊಮ್ಮೆ ಪ್ರೀತಿಗೆ ಹೃದಯವೂ ಇರೋದಿಲ್ಲ, ಅದು ತನ್ನ ಪ್ರೇಮಿಯನ್ನ (Lovers) ಬಿಟ್ಟು ಉಳಿದವರಿಗಾಗಿ ಕಲ್ಲಿನಷ್ಟೇ ಕಠೋರವಾಗಿರುತ್ತೆ. ಇದಕ್ಕೆ ಮೇಘಾಲಯ ಹನಿಮೂನ್ ಕೊಲೆ ಪ್ರಕರಣವೇ ಸಾಕ್ಷಿ.
ಪ್ರೀತಿಗಾಗಿ ಮಧ್ಯಪ್ರದೇಶದ ಯುವತಿಯೊಬ್ಬಳು ಕಟ್ಟಿಕೊಂಡ ಗಂಡನನ್ನೇ ಮೇಘಾಲಯ (Meghalaya) ಮಧುಚಂದ್ರ ಪ್ರವಾಸ ಸಮಯದಲ್ಲಿ ಭೀಕರವಾಗಿ ಕೊಲೆ ಮಾಡಿಸಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹನಿಮೂನ್ಗೆಂದು ಮೇಘಾಲಯಕ್ಕೆ ಹೋದಾಗ ಪತ್ನಿಯು ತನ್ನ ಬಾಯ್ಫ್ರೆಂಡ್ (Boyfriend) ಕಳುಹಿಸಿದ್ದ ಸಹಚರರ ಜೊತೆಗೂಡಿ ಪತಿಯನ್ನೇ ಕೊಲೆ ಮಾಡಿದ್ದು, ಇವರ ಹುಚ್ಚು ಪ್ರೇಮದ ಉನ್ಮಾದದ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ.
ತನ್ನ ಪ್ರಿಯಕರ ಕಳುಹಿಸಿದ್ದ ಸುಪಾರಿ ಹಂತಕರ ನೆರವಿನಿಂದ ತನ್ನ ಪತಿ ರಾಜಾ ರಘುವಂಶಿಯನ್ನೇ ಕೊಲೆ ಮಾಡಿರುವ ಸೋನಮ್ ರಘುವಂಶಿ (Sonam Raghuvanshi), ಇದೀಗ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಜೈಲಿನ ಕಂಬಿ ಎಣಿಸುತ್ತಿದ್ದಾಳೆ. ತನ್ನ ಪ್ರೇಮಿಯೊಟ್ಟಿಗೆ ಜೀವನ ಕಳೆಯಬೇಕೆಂದು ನಾಟಕೀಯ ಮದುವೆಯಾಗಿದ್ದ (Marriage) ಸೋನಂ ಗಂಡನನ್ನ ಕೊಲೆ ಮಾಡಲು ಏನೆಲ್ಲ ಸಂಚು ರೂಪಿಸಿದ್ದಳು? ಕೊಲೆ ಮಾಡಿದ್ಮೇಲೆ ಸಲೀಸಾಗಿ ಎಸ್ಕೇಪ್ ಆಗೋದಕ್ಕೆ ಏನೆಲ್ಲಾ ಸಂಚು ರೂಪಿಸಿದ್ದಳು? ಅನ್ನೋದು ಈಗಾಗಲೇ ಜಗಜ್ಜಾಹೀರಾಗಿದೆ. ಅಲ್ಲದೇ ಪ್ರೇಮದ ಅಮೇಲೇರಿದವರು ತಮ್ಮ ಪತಿಯನ್ನೇ ಕೊಂದ ಪ್ರಕರಣ ಇದೇ ಮೊದಲಲ್ಲ. ಹಿಂದೆಯೂ ಅನೇಕ ಘಟನೆಗಳು ನಡೆದಿವೆ. ಅವುಗಳ ಬಗ್ಗೆ ಒಮ್ಮೆ ಚಿತ್ತ ಹಾಯಿಸೋಣ…. ಅದಕ್ಕೂ ಮುನ್ನ ಮೇಘಾಲಯದ ಹನಿಮೂನ್ ಮರ್ಡರ್ ಪ್ರಕರಣದ ಬಗ್ಗೆ ಗಮನಹರಿಸೋಣ…
ಹನಿಮೂನ್ ಹಂತಕರು…
ಮೇಘಾಲಯ ಹನಿಮೂನ್ ಮರ್ಡರ್ ಮಿಸ್ಟರಿ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮಧ್ಯಪ್ರದೇಶದ ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಕಳೆದ ಮೇ 11ರಂದು ಮದುವೆಯಾಗಿದ್ದರು. ಮೇ 20ರಂದು ಇಬ್ಬರೂ ಮೇಘಾಲಯಕ್ಕೆ ಹನಿಮೂನ್ ಪ್ರವಾಸ ಕೈಗೊಂಡಿದ್ದರು. ಆದರೆ ಮೇ 23ರಂದು ಈ ಜೋಡಿ ನೊಂಗ್ರಿಯಾಟ್ ಹಳ್ಳಿಯಲ್ಲಿರುವ ಹೋಂಸ್ಟೇಯಿಂದ ಹೊರಗೆ ಹೋದ ಗಂಟೆಗಳ ನಂತರ ನಾಪತ್ತೆಯಾಗಿತ್ತು. ಜೂನ್ 2ರಂದು ಈ ಗ್ರಾಮದಿಂದ 20 ಕಿ.ಮೀ ದೂರದಲ್ಲಿರುವ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ವೈಸಾವ್ಡಾಂಗ್ ಜಲಪಾತದ ಬಳಿ, ರಾಜಾ ರಘುವಂಶಿ ಅವರ ಶವ ಪತ್ತೆಯಾಯಾಗಿತ್ತು. ಮೊದಲು ಮೇಘಾಲಯ ಪೊಲೀಸರು ದುಷ್ಕರ್ಮಿಗಳು ರಾಜಾ ರಘುವಂಶಿ ಅವರನ್ನು ಕೊಲೆ ಮಾಡಿ, ಸೋನಮ್ ರಘುವಂಶಿ ಅವರನ್ನು ಅಪಹರಿಸಿದ್ದಾರೆ ಎಂದು ಶಂಕಿಸಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗತೊಡಗಿದಾಗ, ಸೋನಮ್ ಮತ್ತು ಆಕೆಯ ಪ್ರೇಮಿ ತಮ್ಮ ಸಹಚರರೊಂದಿಗೆ ಸೇರಿ ರಾಜಾ ರಘುವಂಶಿ ಅವರನ್ನು ಕೊಲೆ ಮಾಡಿರುವ ಸಂಗತಿ ಬಯಲಾಯಿತು. ಬಳಿಕ ಅವರು ರೂಪಿಸಿದ್ದ ಒಂದೊಂದೇ ರಹಸ್ಯಗಳು ಬಯಲಾದವು.
ಗಂಡನ ರುಂಡ-ಮುಂಡ ತುಂಡು ಮಾಡಿದ್ದ ಕಿರಾತಕಿ
ಇನ್ನೂ ಕೆಲ ದಿನಗಳ ಹಿಂದೆ ಮೀರತ್ನಲ್ಲಿ ನಡೆದ ಹತ್ಯೆ ಪ್ರಕರಣವೊಂದು ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ನನ್ನ ಆತನ ಪತಿ ಮುಸ್ಕಾನ್ ರಸ್ತೋಗಿ ತನ್ನ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆಗೂಡಿ ಭೀಕರವಾಗಿ ಹತ್ಯೆಗೈದಿದ್ದಳು. ಗಂಡನ ರುಂಡ-ಮುಂಡವನ್ನ ತುಂಡುತುಂಡಾಗಿ ಕತ್ತರಿಸಿ ಸಿಮೆಂಟ್ ಡ್ರಮ್ನಲ್ಲಿ ತುಂಬಿದ್ದಳು. ತಲೆ ಕತ್ತರಿಸಿದ್ದ ದೇಹವನ್ನು ಹಾಸಿಗೆ ಕೆಳಗಿಟ್ಟುಕೊಂಡು ಎರಡು ದಿನ ಮಲಗಿದ್ದಳು. ಇದಕ್ಕೆ ಕಾರಣವೂ ಇತ್ತು.
ಮೀರತ್ ಸುಂದ್ರಿ ಕೊಲೆಗೆ ಕಾರಣ ಏನು?
ಮುಸ್ಕಾನ್ ಮತ್ತು ಪ್ರಿಯಕರ ಸಾಹಿಲ್ ಒಂದೇ ಶಾಲೆಯಲ್ಲಿ ಓದಿದ್ದರು. ತಮ್ಮ ಶಾಲೆಯ ವಾಟ್ಸಪ್ ಗ್ರೂಪ್ನಲ್ಲಿದ್ದ ಇವರು 2019ರಿಂದ ಪ್ರೀತಿಸಲು ಶುರು ಮಾಡಿದ್ದರು. ಕೆಲ ದಿನಗಳ ಹಿಂದೆ ಮೀರತ್ನ ಮಾಲ್ವೊಂದರಲ್ಲಿ ನಡೆದ ಪಾರ್ಟಿ ವೇಳೆ ಭೇಟಿಯಾಗಿದ್ದರು. ಬಳಿಕ ಇಬ್ಬರ ಪ್ರೇಮ ಮತ್ತಷ್ಟು ಗಟ್ಟಿಯಾಗಿತ್ತು. ಈ ಸಂಬಂಧಕ್ಕೆ ಸೌರಭ್ ಅಡ್ಡಿಯಾಗುತ್ತಾನೆಂದು ಮುಗಿಸುವ ಪ್ಲ್ಯಾನ್ ಮಾಡಿದ್ದಳು ಮುಸ್ಕಾನ್. ಗಂಡನನ್ನು ಕೊಂದ ನಂತರ ಸ್ನಾನದ ಕೊಠಡಿಗೆ ಅವನ ಮೃತದೇಹ ಎಳೆದೊಯ್ದು, ರೇಜರ್ನಿಂದ ತಲೆ ಕತ್ತರಿಸಿದ್ದಳು. ಇಬ್ಬರೂ ಸೇರಿ ಕೈಗಳನ್ನು ಕಟ್ಟಿ ಹಾಕಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಳು. ಬಳಿಕ ಅದನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಡಬಲ್ ಬೆಡ್ಬಾಕ್ಸ್ನಲ್ಲಿಟ್ಟು ಅದರ ಮೇಲೆಯೇ ಪತ್ನಿ ನಿದ್ರೆ ಮಾಡಿದ್ದಳು. ಅತ್ತ ಸಾಹಿಲ್ ಅವನ ಕೈಗಳನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿ, ಬೆಡ್ರೂಮ್ನಲ್ಲಿಟ್ಟುಕೊಂಡಿದ್ದ. ಸದ್ಯ ಇಬ್ಬರು ಸಿಕ್ಕಿಬಿದ್ದಿದ್ದು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇಷ್ಟಾದರೂ ಇಬ್ಬರ ನಡುವಿನ ಪ್ರೀತಿ ಕಡಿಮೆಯಾಗಿಲ್ಲ. ಮುಸ್ಕಾನ್ ಗರ್ಭಿಣಿಯಾಗಿದ್ದು, ಇದು ಸಾಹಿಲ್ನ ಮಗು ಎಂದೇ ಹೇಳಿಕೊಂಡಿದ್ದಾಳೆ.
ಹರಿಯಾಣ: ದುಪಟ್ಟಾದಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ
ಮೀರತ್ ಪ್ರಕರಣ ಆದ ಒಂದೆರಡು ದಿನದಲ್ಲೇ ಹರಿಯಾಣದಲ್ಲೂ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿತ್ತು. ಯೂಟ್ಯೂಬರ್ ಮಹಿಳೆಯೊಬ್ಬಳು ತಾನು ಪ್ರಿಯಕರನೊಂದಿಗೆ ಇರುವುದನ್ನು ಗಂಡ ನೋಡಿದ್ದಕ್ಕೆ ಆತನ ಕುತ್ತಿಗೆಗೆ ದುಪ್ಪಟ್ಟಾದಿಂದ ಬಿಗಿದು ಕೊಲೆ ಮಾಡಿದ್ದಳು ಬಿನ್ನಾಣಗಿತ್ತಿ. ರವೀನಾ ಎಂಬ ಮಹಿಳೆ ಇನ್ಸ್ಟಾದಲ್ಲಿ ಸುರೇಶ್ ಎಂಬಾತನೊಂದಿಗೆ ಸಂಪರ್ಕ ಬೆಳೆದಿದ್ದಳು. ಆದ್ರೆ ಆಕೆ ನಿತ್ಯವೂ ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆಯುವುದರ ಕುರಿತು ಪತಿ ಪ್ರವೀಣ್ ಜಗಳವಾಡುತ್ತಿದ್ದ. ಈ ನಡುವೆ ಸುರೇಶ್ ಜೊತೆ ರವೀನಾ ಕಾಮದಾಟವಾಡಲು ಶುರು ಮಾಡಿದ್ದಳು. ಒಮ್ಮೆ ಸುರೇಶ್ಜೊತೆಗೆ ಸರಸವಾಡುತ್ತಾ ಸಿಕ್ಕಿಬಿದ್ದಾಗ ಪ್ರವೀಣ್ ತಾಳ್ಮೆ ಕಳೆದುಕೊಂಡು ಜೋರು ಜಗಳ ಶುರು ಮಾಡಿದ್ದ. ಕೊನೆಗೆ ತನ್ನ ಪ್ರಿಯಕರನೊಂದಿಗೇ ಸೇರಿ ಕುತ್ತಿಗೆಗೆ ದುಪ್ಪಟ್ಟಾದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಸಂಜೆಯಾಗುವವರೆಗೆ ಹೆಣವನ್ನು ಅಲ್ಲೇ ಇಟ್ಟುಕೊಂಡು ಬಳಿಕ, 6 ಕಿಮೀ ಬೈಕ್ನಲ್ಲಿ ಹೋಗಿ ಚರಂಡಿಗೆ ದೇಹ ಎಸೆದಿದ್ದರು. ಸದ್ಯ ಇಬ್ಬರೂ ಜೈಲಿನಲ್ಲಿದ್ದಾರೆ.
ಕಾಮದಾಟಕ್ಕೆ ಕಂಟಕನಾದ ಪತಿಯನ್ನ ಕೊಂದೇಬಿಟ್ಟಳು
ಇನ್ನೂ ಕರ್ನಾಟಕ ಕೂಡ ಇಂತಹ ಪ್ರಕರಣಗಳಿಂದ ಹೊರತಾಗಿಲ್ಲ. ಕೆಲ ತಿಂಗಳ ಹಿಂದೆಯಷ್ಟೇ ಮೈಸೂರಿನಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಶಬೀನ್ ತಾಜ್ ತನ್ನ ಪತಿ ಮೊಹಮ್ಮದ್ ಶಫಿಯನ್ನ ಭೀಕರವಾಗಿ ಹತ್ಯೆಗೈದಿದ್ದಳು. ಈ ಕುರಿತು ಮೈಸೂರಿನ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಇಬ್ಬರ ಸಂಸಾರಕ್ಕೆ 16 ವರ್ಷ ತುಂಬಿತ್ತು. ದಂಪತಿಗೆ 12 ವರ್ಷದ ಮಗಳೂ ಇದ್ದಳು. ರೇಡಿಯೇಟರ್ ಕೆಲಸ ಮಾಡ್ತಿದ್ದ ಶಫಿ ಕುಟುಂಬದಲ್ಲಿ 5-6 ವರ್ಷದಿಂದ ಅನ್ಯೋನ್ಯತೆ ಇರಲಿಲ್ಲ. ಶಬೀನ್ ಕೂಡ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದಳು. ಅನ್ವರ್ ಎಂಬಾತ ಪ್ರತಿದಿನ ಆಟೋದಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಕರೆದೊಯ್ಯುತ್ತಿದ್ದ. ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಪ್ರೇಮವಾಗಿ ಪ್ರೇಮ ಕಾಮಕ್ಕೆ ತಿರುಗಿತ್ತು. ಈ ವಿಚಾರಕ್ಕೆ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಕೊನೆಗೆ ಇದ್ದರೆ ಕಾಮದಾಟಕ್ಕೆ ಅಡ್ಡಿಯಾಗುತ್ತದೆ ಎಂದು ನಿರ್ಧರಿಸಿದ ಶಬೀನ್, ಶಫಿಯನ್ನ ಮುಗಿಸಲು ಪ್ರಿಯಕರನಿಗೆ ಸ್ಕೆಚ್ ಹಾಕಿಕೊಟ್ಟಳು. ಕೊನೆಗೆ ಶಫಿ ಮಲಗಿದ್ದಾಗ ಚಾರ್ಜರ್ ವೈಯರ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಳು. ಕೊನೆಗೆ ಇದೊಂದು ಆಕಸ್ಮಿಕ ಸಾವು ಅಂತ ಬಿಂಬಿಸಿದ್ದಳು. ಆದ್ರೆ ಶವ ಸಂಸ್ಕಾರದ ವೇಳೆ ಕುತ್ತಿಗೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿರುವುದು ಕಂಡುಬಂದಿತ್ತು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿ ಈ ಬಗ್ಗೆ ತನಿಖೆ ನಡೆಸಿದಾಗ ಶಬೀನ್ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿತು.
ಇಷ್ಟೇ ಅಲ್ಲ ಇತ್ತೀಚೆಗೆ ಹಾಸನದಲ್ಲಿ ಮಹಿಳೆಯೊಬ್ಬಳು ಇಬ್ಬಿಬ್ಬರ ಜೊತೆ ಅಕ್ರಮ ಸಂಬಂಧ ಹೊಂದ್ದಿದ್ದಳು. ಇದಕ್ಕೆ ಅಡ್ಡಿಯಾಗುತ್ತಾರೆಂದು ಪತಿ ಮತ್ತು ಅತ್ತೆ ಕುಟುಂಬವನ್ನೇ ಮುಗಿಸಲು ಅನ್ನಕ್ಕೆ ವಿಷ ಬೆರಸಿಕೊಟ್ಟಿದ್ದಳು. ಅತಿಯಾದ ಪ್ರೀತಿ ಅಮಲಾಗಿ ಕಾಡಿದಾಗ ಈ ರೀತಿ ಆಗುತ್ತದೆ ಎನ್ನೋದಕ್ಕೆ ಇಂತಹ ಪ್ರಕರಣಗಣೇ ಉದಾಹರಣೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.