ಬೆಂಗಳೂರು: ಅದೊಂದು ನಿಗೂಢ ವೀರಗಲ್ಲು. ಆ ವೀರಗಲ್ಲನ್ನು ಯಾರೂ ಅಲುಗಾಡಿಸುವ ಹಾಗಿಲ್ಲ. ಇದನ್ನು ಸ್ಥಳಾಂತರ ಮಾಡೋದಕ್ಕೆ ಹೋದರೆ ಅನಾಹುತ ಫಿಕ್ಸ್ ಅಂತ ಇಲ್ಲಿನ ಜನ ನಂಬಿದ್ದಾರೆ.
ಎರಡು ಬಿಳಿಯ ಕಲ್ಲು, ಕಲ್ಲಿನಲ್ಲಿ ಅದೇನೋ ಕೆತ್ತನೆ. ದಾಸರಹಳ್ಳಿಯ ಜಮೀನಿನಲ್ಲಿ ಸಾಕಷ್ಟು ವರ್ಷದ ಹಿಂದೆ ಸಿಕ್ಕ ರಾಜರ ಕಾಲದ ವೀರಗಲ್ಲು ಇದು. ಬರೋಬ್ಬರಿ 700ರ ಇಸವಿಯಲ್ಲಿದ್ದ ಅರಸಿಂಗ ಎನ್ನುವ ಸೈನಿಕನ ಸ್ಮಾರಕವಿದೆ. ಆದರೆ ಆ ಸ್ಮಾರಕವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡೋದಕ್ಕೆ ಸಾಧ್ಯವೇ ಇಲ್ವಂತೆ. ಈ ಹಿಂದೆ ಸ್ಥಳಾಂತರ ಮಾಡೋದಕ್ಕೆ ಮುಂದಾದಾಗ ಸಾಲು ಸಾಲು ಅನಾಹುತ ಸಂಭವಿಸಿದೆಯಂತೆ. ಹೀಗಾಗಿ ಆ ವೀರಗಲ್ಲಿನ ಬಗ್ಗೆ ಜನರಿಗೆ ಭಯವುಂಟಾಗಿದೆ.
ಇನ್ನು ಆ ಕಲ್ಲಿನ ಮೇಲೆ ಕನ್ನಡ ಲಿಪಿಯಲ್ಲಿ ಆ ಶಾಸನ ಉಳಿಸಿಕೊಂಡು ಹೋದವರಿಗೆ ಒಳ್ಳೆಯದಾಗುತ್ತೆ, ಹಾಳು ಮಾಡಿದವರಿಗೆ ಶಾಪ ಸಿಗುತ್ತೆ ಎಂದು ಕೆತ್ತಲಾಗಿದೆ. ಅದ್ದರಿಂದ ಈ ವೀರಗಲ್ಲನ್ನು ಸೈಟ್ ನಲ್ಲಿಯೇ ಬಿಟ್ಟು ಪೂಜೆ ಮಾಡೋದಕ್ಕೆ ಶುರು ಮಾಡಿದ್ದಾರೆ. ವಿಶೇಷ ಅಂದರೆ ಈ ವೀರಗಲ್ಲಿನ ಮುಂದೆ ಏನು ಬೇಡಿದರೂ ಇಷ್ಟಾರ್ಥ ನೇರವೇರುತ್ತೆ ಎನ್ನುವ ನಂಬಿಕೆ ಇಲ್ಲಿನ ಸ್ಥಳೀಯ ಜನರದ್ದು.
ಅಷ್ಟಕ್ಕೂ ಆ ವೀರಗಲ್ಲು ಗೋವನ್ನು ಕದಿಯಲು ಬಂದಾಗ ರಕ್ಷಣೆ ಮಾಡೋದಕ್ಕೆ ಹೋಗಿ ಸತ್ತ ಯುವಕನೊಬ್ಬನದಂತೆ. ಅವನ ನೆನಪಿಗೆ ಆ ವೀರಗಲ್ಲು ನಿರ್ಮಾಣ ಮಾಡಲಾಗಿದೆ. ಆದರೆ ಇದು ಬೇರೆ ಶಾಸನದಂತೆ ಅಲ್ಲ. ಯಾವುದೋ ಅತೀತ ಶಕ್ತಿ ಇದರಲ್ಲಿದೆ ಎನ್ನುವ ನಂಬಿಕೆ ಊರ ಜನರದು. ಆದರೆ ಇತಿಹಾಸ ತಜ್ಞರು ಇದೆಲ್ಲ ಮೂಢನಂಬಿಕೆ, ಇದು ಒಂದು ವ್ಯಕ್ತಿಯ ಸ್ಮಾರಕದ ಶಾಸನವಷ್ಟೇ ಎಂದು ಹೇಳುತ್ತಾರೆ.