ಈ ಆಟೋ ಚಾಲಕನ ಹೃದಯವಂತಿಕೆಗೆ ನೀವೂ ಮನಸೋಲಬಹುದು!

2 Min Read

ಹೈದರಾಬಾದ್: ಜಗತ್ತಿನಲ್ಲಿ ಒಳ್ಳೆಯ ವ್ಯಕ್ತಿಗಳಿಗೇನೂ ಕೊರತೆಯಿಲ್ಲ ಅನ್ನೋದಕ್ಕೆ ಈ ಘಟನೆಯೇ ಒಂದು ನೈಜ ಉದಾಹರಣೆ.

ಹೌದು. ವಾರಿಜಶ್ರೀ ವೇಣುಗೋಪಾಲ್ ಎಂಬ ಯುವತಿಯೊಬ್ಬರು ಹೈದರಾಬಾದ್‍ನಲ್ಲಿ ವೀಸಾ ಸಂದರ್ಶನಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ಆಕೆಗೆ ಹಣದ ಕೊರೆತೆಯಾಗಿತ್ತು. ಈ ವೇಳೆ ಅಲ್ಲಿನ ಆಟೋ ಚಾಲಕರೊಬ್ಬರು ತನಗೆ ಸಹಾಯ ಮಾಡಿದ ಬಗ್ಗೆ ವಾರಿಜಶ್ರೀ ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದು, ಇದೀಗ ಈ ಪೋಸ್ಟ್ ವೈರಲ್ ಆಗಿದೆ.

ಫೇಸ್ಬುಕ್ ಪೋಸ್ಟ್ ನಲ್ಲೇನಿದೆ?: ಇವರ ಹೆಸರು ಬಾಬಾ. ಆಟೋ ಚಾಲಕರಾಗಿರುವ ಬಾಬಾ ಅವರು ಇಂದು ನನ್ನನ್ನ ರಕ್ಷಿಸಿದ್ರು. ನಾನು ಹೈದರಾಬಾದ್‍ಗೆ ನನ್ನ ವೀಸಾ ಸಂದರ್ಶನಕ್ಕೆಂದು ಬಂದಿದ್ದೆ. ಈ ವೇಳೆ ಅಲ್ಲಿ ನನಗೆ ಹಣದ ಕೊರತೆಯಾಗಿತ್ತು. ವೀಸಾ ಶುಲ್ಕಕ್ಕಾಗಿ 5,000 ರೂ ಬೇಕಿತ್ತು. ಆದ್ರೆ ನನ್ನ ಬಳಿ ಇದ್ದಿದ್ದು ಸುಮಾರು 2000 ರೂ. ಮಾತ್ರ. ನಾವು ಸುಮಾರು 10-15 ಎಟಿಎಂಗಳಿಗೆ ಅಲೆದಾಡಿದೆವು. ಆದ್ರೆ ಎಲ್ಲೂ ಹಣ ಸಿಗಲಿಲ್ಲ. ಹೈದರಾಬಾದ್‍ನಲ್ಲಿ ಅನೇಕ ಕಡೆ ಎಟಿಎಂಗಳಲ್ಲಿ ಸಮಸ್ಯೆ ಇತ್ತು.

ಈ ವೇಳೆ ನನ್ನ ಪರಿಸ್ಥಿತಿಯನ್ನು ಅರಿತ ಆಟೋ ಚಾಲಕ ಅವರು ಕೂಡಿಟ್ಟ 3 ಸಾವಿರ ರೂ. ಕೊಟ್ಟರು. “ಮೇಡಂ ಅದನ್ನು ತೆಗೆದುಕೊಳ್ಳಿ. ಬಳಿಕ ಹೊಟೇಲ್ ಹತ್ರ ಬಂದು ವಾಪಾಸ್ ಮಾಡಿ ಪರವಾಗಿಲ್ಲ” ಅಂತಾ ಹೇಳಿದ್ರು.

ಆಟೋ ಚಾಲಕನ ಈ ಮಾನವೀಯತೆ ನೋಡಿ ನನಗೆ ತುಂಬಾ ಖುಷಿಯಾಯಿತು. ಇವರ ಸಹಾಯ ಮನೋಭಾವಕ್ಕೆ ಕೃತಜ್ಞತೆ ಹೇಳಬೇಕು. ಇಂತಹ ವ್ಯಕ್ತಿಯನ್ನು ಈ ಹಿಂದೆ ಯಾವತ್ತೂ ಭೇಟಿಯಾಗಿಲ್ಲ. ಅಪರಿಚಿತರೊಬ್ಬರಿಗೆ ಅವರು ನಿಸ್ವಾರ್ಥತೆಯಿಂದ ಸಹಾಯ ಮಾಡಿದ್ದು ನನ್ನ ಮನಸ್ಸು ತಟ್ಟಿತು.

ಹೌದು, ಕೆಲವೊಂದು ಬಾರಿ ದೇವರು ಅತ್ಯಂತ ಚಿತ್ರ ಹಾಗೂ ಸುಂದರ ಸನ್ನಿವೇಶಗಳಲ್ಲಿ ನಮಗೆ ಗೋಚರಿಸುತ್ತಾನೆ. ಪ್ರತಿದಿನವೂ ಹೊಸ ಪಾಠಗಳನ್ನು ಕಲಿಯುತ್ತೇವೆ. ನಿಮ್ಮಂತಹ ಸ್ನೇಹಿತನನ್ನು ಪಡೆದಿದ್ದಕ್ಕೆ ನಾನು ನಿಜಕ್ಕೂ ಧನ್ಯ. ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುದನ್ನು ನೆನಪಿಸಿದ್ದಕ್ಕೆ ಧನ್ಯವಾದ ಅಂತಾ ವಾರಿಜಾಶ್ರೀ ಆಟೋ ಚಾಲಕ ಬಾಬ ಅವರ ಫೋಟೋದೊಂದಿಗೆ ಫೇಸ್ಬುಕ್‍ನಲ್ಲಿ ಈ ಪೋಸ್ಟ್ ಹಾಕಿದ್ದಾರೆ.

ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನ ಸಹಾಯ ಮನೋಭಾವವನ್ನು ಎಲ್ಲರು ಕೊಂಡಾಡುತ್ತಿದ್ದಾರೆ. ಏಪ್ರಿಲ್ 11ರಂದು ಹಾಕಿರೋ ಈ ಪೋಸ್ಟ್ ಗೆ 31 ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿದ್ದು, ಇಲ್ಲಿಯವರೆಗೆ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

https://www.facebook.com/varijashree/posts/10212441979669404

Share This Article
Leave a Comment

Leave a Reply

Your email address will not be published. Required fields are marked *