ಹಾವೇರಿ: ಕದ್ದ ಚಿನ್ನವನ್ನು ಖದೀಮ ವಾಪಸ್ ದೇವರ ಮುಂದಿಟ್ಟು ಹೋದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ದಾನಮ್ಮದೇವಿ ದೇವಸ್ಥಾನದಲ್ಲಿ ನಡೆದಿದೆ.
ಡಿಸೆಂಬರ್ 4ರಂದು ಈ ಕಳ್ಳತನದ ಪ್ರಕರಣ ನಡೆದಿತ್ತು. ದೇವಸ್ಥಾನದಲ್ಲಿ ನಡೆದಿದ್ದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಕಳ್ಳತನವಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಶಿಕ್ಷಕಿ ಶೋಭಾ ಯಳವಟ್ಟಿ ಎಂಬವರ 46 ಗ್ರಾಂ ತೂಕದ ಸರವನ್ನು ದೋಚಿ ಪರಾರಿಯಾಗಿದ್ದ. ಅಲ್ಲದೇ 46 ಗ್ರಾಂ ತೂಕದ ಚಿನ್ನದ ಸರ ಕರಗಿಸಿ ಅಪರಂಜಿ ಚಿನ್ನ ಮಾಡಿದ್ದ ಎನ್ನಲಾಗಿದೆ.
ಇದೀಗ ಖದೀಮ ಕ್ಷಮಾಪಣೆ ಪತ್ರದೊಂದಿಗೆ ಚಿನ್ನವನ್ನು ದೇವಸ್ಥಾನದ ಮುಂದಿನ ಕಾಣಿಕೆ ಡಬ್ಬಿ ಪಕ್ಕದಲ್ಲಿಟ್ಟು ಹೋಗಿದ್ದಾನೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಪತ್ರದಲ್ಲಿ ಏನಿದೆ?
ದಾನಮ್ಮ ದೇವಿ ಸದಸ್ಯರಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ ದಾನಮ್ಮನ ಜಾತ್ರೆಯಲ್ಲಿ ನನಗೆ ಸರ ಸಿಕ್ಕಿತ್ತು. ದೇವಿನೇ ನಮ್ಮ ಕಷ್ಟಕಾಲದಲ್ಲಿ ಕಣ್ಣು ತೆರೆದು ಪ್ರಸಾದ ಕೊಟ್ಟಿದ್ದಾಳೆಂದು ನಂಬಿ ಅದನ್ನು ನಾನು ಮನೆಗೆ ತೆಗೆದುಕೊಂಡು ಹೋಗಿದ್ದೆ. ಅಂದಿನಿಂದ ನನಗೆ ಏಕೋ ತಪ್ಪಿನ ಅರಿವಾಗತೊಡಗಿ ಅದನ್ನು ವಾಪಸ್ ಕೊಡಬೇಕೆಂದು ಅನ್ನಿಸ ತೊಡಗಿತು. ಅದಕ್ಕೆ ಅದನ್ನು ಕರಗಿಸಿದರೂ ಉಪಯೋಗಿಸುವ ಮನಸಾಗದ್ದಕ್ಕೆ ತಂದು ಇಟ್ಟಿದ್ದೇನೆ. ಅದನ್ನು ಅದರ ಯಜಮಾನರಿಗೆ ಮುಟ್ಟಿಸುವ ವ್ಯವಸ್ಥೆ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಇಂತಿ ದಾನಮ್ಮನ ಭಕ್ತರು ಎಂದು ಪತ್ರದಲ್ಲಿ ಬರೆದಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv