ಬೆಂಗಳೂರು: ಟೆಕ್ಕಿ ಪತಿಯೊಬ್ಬ ದೇವರ ದರ್ಶನಕ್ಕೆಂದು ಪತ್ನಿಯನ್ನು ಕರೆದುಕೊಂಡು ಹೋಗಿ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ನವೀನ್ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಟೆಕ್ಕಿ. ನವೀನ್ ದಂಪತಿ ರಾಜಾಜಿನಗರದಲ್ಲಿ ವಾಸವಾಗಿದ್ದರು. ಕೆಲ ದಿನಗಳಿಂದ ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಆರೋಪಿ ನವೀನ್ ಪದೇ ಪದೇ ವರದಕ್ಷಿಣೆ ಕೊಡುವಂತೆ ಪತ್ನಿಯನ್ನ ಪೀಡಿಸುತ್ತಿದ್ದನು ಎಂದು ತಿಳಿದುಬಂದಿದೆ.
ಮೂರು ದಿನಗಳ ಹಿಂದೆ ನವೀನ್ ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬರೋಣ ಎಂದು ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದನು. ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ಅಲ್ಲಿಂದ ವಾಪಸ್ ಬರುತ್ತಿದ್ದಾಗ ಕುಣಿಗಲ್ ಬಳಿ ನವೀನ್ ಏಕಾಏಕಿ ರಾಡ್ ನಿಂದ ನನಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ.
ಈ ವೇಳೆ ಅದೃಷ್ಟವಶಾತ್ ನವೀನ್ ಕೈಯಿಂದ ತಪ್ಪಿಸಿಕೊಂಡು ಬಂದು ಸಾರ್ವಜನಿಕರ ಸಹಾಯದಿಂದ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ ನಡೆದ ವಿಚಾರದ ಬಗ್ಗೆ ತಮ್ಮ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಪೋಷಕರು ಈ ಕುರಿತು ನೆಲಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದೀಗ ಪೋಷಕರ ದೂರಿನ ಮೇರೆಗೆ ನೆಲಮಂಗಲ ಪೊಲೀಸರು ಆರೋಪಿ ನವೀನ್ನನ್ನು ಬಂಧಿಸಿದ್ದಾರೆ.