ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜನಸಾಮಾನ್ಯರ ಮೇಲೆ ತೆರಿಗೆಯನ್ನು ಹೇರುತ್ತಿದೆ. ಆದರೆ ಶ್ರೀಮಂತರಿಗೆ ತೆರಿಗೆ ವಿನಾಯಿತಿ ನೀಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಪಿಂಚಣಿ ನೀಡಲು ಹಣವಿಲ್ಲ ಎಂದು ಅಗ್ನಿಪಥ ಯೋಜನೆ ತಂದರು. ಸೈನಿಕರಿಗೆ ಪಿಂಚಣಿ ನೀಡಲು ದೇಶಕ್ಕೆ ಹಣವಿಲ್ಲದೆ ಪರದಾಡುವ ಸ್ಥಿತಿ ಸ್ವಾತಂತ್ರ್ಯ ನಂತರ ಇದುವರೆಗೂ ಬಂದಿರಲಿಲ್ಲ ಎಂದು ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ಭಾರತದ 14ನೇ ಉಪರಾಷ್ಟ್ರಪತಿಯಾಗಿ ಧನಕರ್ ಪ್ರಮಾಣ ವಚನ
ಕೇಂದ್ರ ಸರ್ಕಾರದ ಹಣ ಎಲ್ಲಿ ಹೋಯಿತು? ಕೇಂದ್ರ ಸರ್ಕಾರವು ತಾನು ಸಂಗ್ರಹಿಸುವ ತೆರಿಗೆಯ ಒಂದು ಭಾಗವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆ. ಈ ಹಿಂದೆ ಇದು ಶೇ.42ರಷ್ಟಿತ್ತು. ಈಗ ಅದನ್ನು ಶೇ.29-30ಕ್ಕೆ ಕಡಿತಗೊಳಿಸಲಾಗಿದೆ. ಎಲ್ಲಿಗೆ ಹೋಗುತ್ತಿದೆ ಹಣ ಎಂದು ಪ್ರಶ್ನಿಸಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿವೆ. ಬಡವರ ಗೋಧಿ, ಅಕ್ಕಿಗೂ ಕೇಂದ್ರ ಸರ್ಕಾರ ತೆರಿಗೆ ವಿಧಿಸಿರುವುದು ಕ್ರೂರ ಕೆಲಸ. ಗೋಧಿ, ಅಕ್ಕಿ, ಲಸ್ಸಿ, ಪನೀರ್ ಮೇಲೆ ತೆರಿಗೆ. ಹೀಗೆ ಬಡವರ ಆಹಾರದ ಮೇಲೆ ಕೇಂದ್ರ ತೆರಿಗೆ ವಿಧಿಸುವಷ್ಟು ಹದಗೆಟ್ಟಿದ್ದು ಹೇಗೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಲ್ಲಿದ್ದಲು ಹಗರಣ – 8 ಐಪಿಎಸ್ ಅಧಿಕಾರಿಗಳಿಗೆ ED ಸಮನ್ಸ್
2014ರಲ್ಲಿ 20 ಲಕ್ಷ ಕೋಟಿ ರೂ. ಇದ್ದ ಕೇಂದ್ರದ ಬಜೆಟ್ ಈಗ 40 ಲಕ್ಷ ಕೋಟಿಯಾಗಿದೆ. ಅತಿ ಶ್ರೀಮಂತರ, ಅವರ ಆಪ್ತರ ಸಾಲ ಮನ್ನಾ ಮಾಡಲು ಕೇಂದ್ರ 10 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಅವರು ಈ ಸಾಲಗಳನ್ನು ಮನ್ನಾ ಮಾಡದಿದ್ದರೆ, ಸರ್ಕಾರವು ಜನರ ಆಹಾರದ ಮೇಲೆ ತೆರಿಗೆ ವಿಧಿಸುವ ಅಗತ್ಯವಿರುತ್ತಿರಲಿಲ್ಲ. ಸೈನಿಕರ ಪಿಂಚಣಿ ಪಾವತಿಸಲು ಅವರ ಬಳಿ ಹಣವಿರುತ್ತದೆ. ದೊಡ್ಡ, ದೊಡ್ಡ ಕಂಪನಿಗಳ 5 ಲಕ್ಷ ಕೋಟಿ ರೂ. ಮೌಲ್ಯದ ತೆರಿಗೆಯನ್ನೂ ಸರ್ಕಾರ ಮನ್ನಾ ಮಾಡಿದೆ ಎಂದು ತಿಳಿಸಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟೀಕೆಯನ್ನು ಬಿಜೆಪಿ ತಳ್ಳಿಹಾಕಿದೆ. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ, ಕೇಜ್ರಿವಾಲ್ ತಮ್ಮ ಆರೋಪವನ್ನು 24 ಗಂಟೆಗಳಲ್ಲಿ ಸಾಬೀತುಪಡಿಸುವಂತೆ ಸವಾಲು ಹಾಕಿದೆ. ಇದನ್ನೂ ಓದಿ: ಲಿಪ್ಸ್ಟಿಕ್ನಿಂದ ವಾಲ್ ಮೇಲೆ ಡೆತ್ ನೋಟ್ – ಗೃಹಿಣಿ ಆತ್ಮಹತ್ಯೆಗೆ ಕಿರುಕುಳವೇ ಕಾರಣವಾಯ್ತಾ?