ಬೆಂಗಳೂರು/ಮಂಡ್ಯ: ಮಂಡ್ಯ ಲೋಕಸಭಾ ಅಖಾಡ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಮಂಡ್ಯ (Mandya) ಬಿಜೆಪಿ ಟಿಕೆಟ್ಗೆ ಬಿಗಿಪಟ್ಟು ಹಿಡಿದಿರುವ ಸಂಸದೆ ಸುಮಲತಾ (Sumalatha Ambareesh) ಇಂದು ಬೆಂಬಲಿಗರು, ಹಿತೈಷಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಇನ್ನು ಸಂಸದೆಯೊಂದಿಗೆ ಅಂತರ ಕಾಯ್ದುಕೊಂಡಿರುವ ಇಂಡವಾಳು ಸಚ್ಚಿದಾನಂದ (Induvalu Sachidananda) ಅವರನ್ನು ಸಭೆಗೆ ಕರೆತರಲು ಸುಮಲತಾ ನಟ ದರ್ಶನ್ ಅವರ ಮೊರೆ ಹೋಗಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಕಹಳೆ ಊದಿ ಸಂಸದೆಯಾಗಿದ್ದ ಸುಮಲತಾ ಮತ್ತೆ ಅಖಾಡಕ್ಕೆ ಧುಮುಕಿದ್ದಾರೆ. ಬಿಜೆಪಿಗೆ (BJP) ಈಗಾಗಲೇ ಬಾಹ್ಯ ಬೆಂಬಲ ನೀಡಿರುವ ಸುಮಲತಾ ಬಿಜೆಪಿ ಟಿಕೆಟ್ಗೆ ಬಿಗಿಪಟ್ಟು ಹಿಡಿದಿದ್ದಾರೆ. ಮಂಡ್ಯದಿಂದಲೇ ನನ್ನ ಸ್ಪರ್ಧೆ ಖಚಿತ ಎಂದು ಸ್ಪಷ್ಟ ಸಂದೇಶ ತಿಳಿಸಿದ್ದಾರೆ. ಆದರೆ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಹಿನ್ನೆಲೆ ಮೈತ್ರಿ ಟಿಕೆಟ್ ಜೆಡಿಎಸ್ ಪಾಲಾಗಿದೆ ಎನ್ನಲಾಗುತ್ತಿದೆ. ಇದರ ನಡುವೆ ಸಂಸದೆ ಸುಮಲತಾ ಇಂದು ಬೆಂಬಲಿಗರು, ಆಪ್ತರ ಸಭೆ ಕರೆದಿದ್ದಾರೆ. ಬೆಂಗಳೂರಿನ ಸುಮಲತಾ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಬೆಂಬಲಿಗರು, ಹಿತೈಷಿಗಳು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸಮುದ್ರದಲ್ಲಿ ವೇವ್ ರೈಡರ್ ಬಾಯ್ ಜಾಗ ಪತ್ತೆ – ನೌಕಾದಳದ ಭದ್ರತೆ ನಡುವೆ ಕಳವು?
ಸುಮಲತಾರ ಬೆಂಗಳೂರು ನಿವಾಸದಲ್ಲಿ ಸಂಜೆ 4 ಗಂಟೆಗೆ ಹೈವೋಲ್ಟೇಜ್ ಮೀಟಿಂಗ್ ನಡೆಯಲಿದೆ. ಸಭೆಯಲ್ಲಿ ಸುಮಲತಾ ಹಾಗೂ ಅಂಬರೀಶ್ ಅವರ 100 ರಿಂದ 150ಕ್ಕೂ ಹೆಚ್ಚು ಪ್ರಮುಖ ಬೆಂಬಲಿಗರು, ಆಪ್ತರು ಭಾಗಿಯಾಗಲಿದ್ದಾರೆ. ಚುನಾವಣೆ ಸಿದ್ಧತೆ ಕುರಿತು ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ಮುಳ್ಳಯ್ಯನಗಿರಿ ತಪ್ಪಲಿನ ಬೈರೇಗುಡ್ಡದಲ್ಲಿ ಕಾಡ್ಗಿಚ್ಚು – ನೂರಾರು ಎಕರೆ ಅರಣ್ಯ ನಾಶ
ಇನ್ನು ಈ ಸಭೆಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ ಕೂಡ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಮತ್ತಷ್ಟು ಕುತೂಹಲ ಕೆರಳಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸುಮಲತಾ ಬೆನ್ನಿಗೆ ನಿಂತ ಇಂಡವಾಳು ಸಚ್ಚಿದಾನಂದ ಸದ್ಯ ಸಂಸದೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಸಂಸದೆ ಸುಮಲತಾಗೆ ದೊಡ್ಡ ಹಿನ್ನಡೆಯಾಗಿದ್ದು, ಮತ್ತೆ ಅಖಾಡಕ್ಕೆ ಧುಮುಕಿದರೆ ಸಚ್ಚಿದಾನಂದ ಸಂಸದೆಗೆ ಅನಿವಾರ್ಯ. ಆದ್ದರಿಂದ ಸಚ್ಚಿ ಜೊತೆ ಮತ್ತೆ ಬಾಂಧವ್ಯ ಬೆಸಯಲು ಡಿ ಬಾಸ್ ಮೊರೆ ಹೋಗಿರುವ ಸುಮಲತಾ ಅವರು ಸಚ್ಚಿದಾನಂದ ಜೊತೆ ಸಂಧಾನ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಲೋಕಸಮರಕ್ಕೆ ಭರ್ಜರಿ ತಾಲೀಮು – ಬಿಜೆಪಿಗೆ 10 ಕ್ಷೇತ್ರಗಳದ್ದೇ ತಲೆನೋವು
ಒಟ್ಟಾರೆ ಇಂದಿನ ಹೈವೋಲ್ಟೇಜ್ ಮೀಟಿಂಗ್ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದು, ಸಂಸದೆ ಸುಮಲತಾರ ನಡೆ ಏನು ಎಂದು ತೀವ್ರ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಮೋಸ್ಟ್ ಕಮ್ಯುನಲ್ & ಕ್ರಿಮಿನಲ್ ಪಾರ್ಟಿ – ಸಿ.ಟಿ ರವಿ ವಾಗ್ದಾಳಿ