ಚಿಕ್ಕಮಗಳೂರು: ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಹಾಗೂ ಸುಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ (Mullayanagiri) ಗುಡ್ಡದ ತಪ್ಪಲಿನಲ್ಲಿ ಕಾಡ್ಗಿಚ್ಚು (Fire) ಹಬ್ಬಿದ್ದು, ನೂರಾರು ಎಕರೆ ಅರಣ್ಯ (Forest) ಸುಟ್ಟು ಕರಕಲಾಗಿದೆ.
ಮುಳ್ಳಯ್ಯನಗಿರಿ ಸಮೀಪದ ಬೈರೇಗುಡ್ಡ ಎಂಬಲ್ಲಿ ಕಾಡಿಗೆ ಬೆಂಕಿ ಬಿದ್ದಿದ್ದು, ನೂರಾರು ಎಕರೆ ಅರಣ್ಯ ಸುಟ್ಟು ಬೂದಿಯಾಗಿದೆ. ಬೈರೇಗುಡ್ಡ ಸಮೀಪ ಹೊತ್ತಿದ ಕಾಡ್ಗಿಚ್ಚು ಕವಿಕಲ್ ಗಂಡಿ ಅರಣ್ಯದವರೆಗೂ ಗುಡ್ಡದಿಂದ ಗುಡ್ಡಕ್ಕೆ ವ್ಯಾಪಿಸಿದೆ. ಕಾಡ್ಗಿಚ್ಚಿನ ಸ್ಥಳಕ್ಕೆ ಹೋಗಲಾರದೇ ಅರಣ್ಯಾಧಿಕಾರಿಗಳು ಪರದಾಡುವಂತಾಗಿದೆ. ಬೈರೇಗುಡ್ಡ ಅತ್ಯಂತ ಎತ್ತರ, ಅರಣ್ಯ ಹಾಗೂ ಇಳಿಜಾರಿನ ಪ್ರದೇಶವಾಗಿದೆ. ಮುಳ್ಳಯ್ಯನಗಿರಿಯಲ್ಲಿ ಬೀಸುವ ಭಾರೀ ಗಾಳಿಗೆ ಬೆಂಕಿಯ ಕೆನ್ನಾಲಿಗೆ ಹೆಚ್ಚಿದ್ದರಿಂದ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ಲೋಕಸಮರಕ್ಕೆ ಭರ್ಜರಿ ತಾಲೀಮು – ಬಿಜೆಪಿಗೆ 10 ಕ್ಷೇತ್ರಗಳದ್ದೇ ತಲೆನೋವು
ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಇದ್ದರೂ ಕೂಡ ಬೆಂಕಿಯನ್ನ ನಂದಿಸಲು ಸಾಧ್ಯವಾಗಿಲ್ಲ. ಅತ್ಯಂತ ಎತ್ತರ ಹಾಗೂ ಇಳಿಜಾರಿನ ಪ್ರದೇಶದ ಬೈರೇಗುಡ್ಡದ ಬಳಿ ಹೋಗಲು ಕಷ್ಟಸಾಧ್ಯ. ಬಿಸಿಲ ಝಳಕ್ಕೆ ಸಂಪೂರ್ಣ ಒಣಗಿ ನಿಂತಿರುವ ಅರಣ್ಯ ಯಾವ ಪ್ರಮಾಣದಲ್ಲಿ ಹೊತ್ತಿ ಉರಿಯುತ್ತದೆ ಎಂದು ಊಹಿಸುವುದು ಕಷ್ಟ. ಹಾಗಾಗಿ, ಅರಣ್ಯಾಧಿಕಾರಿಗಳು ಕೂಡ ಬೆಂಕಿ ನಂದಿಸಲು ಹೋರಾಡುತ್ತಿದ್ದಾರೆ. ಅರಣ್ಯಕ್ಕೆ ಸ್ಥಳೀಯರೇ ಬೆಂಕಿ ಕೊಟ್ಟಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಪ್ರಧಾನಿಯಿಂದ ಭಾನುವಾರ ದೇಶದ ಅತಿ ಉದ್ದದ ತೂಗುಸೇತುವೆ ʻಸುದರ್ಶನ ಸೇತುʼ ಲೋಕಾರ್ಪಣೆ