ಕಲಬುರಗಿ: ಆಕಸ್ಮಿಕವಾಗಿ ಧಗಧಗಿಸಿದ ಬೆಂಕಿಗೆ ರೈತರು ಬೆಳೆದ ಲಕ್ಷಾಂತರ ಮೌಲ್ಯದ ಕಬ್ಬು ಬೆಳೆ ಸುಟ್ಟು ಭಸ್ಮವಾಗಿರುವ ಘಟನೆ ಚಿತ್ತಾಪುರ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ತಿಪ್ಪಣ್ಣ ಮುದಬುಳ, ಬಸವರಾಜ ಪಂಚಾಳ, ಚಂದ್ರಕಾಂತ ಸೇರಿದಂತೆ ಹಲವು ರೈತರು ಬೆಳೆದ ಹತ್ತಾರು ಎಕ್ಕರೆಯ ಕಬ್ಬು ಬೆಂಕಿಗಾಹುತಿ ಆಗಿದೆ. ಸಮೃದ್ಧವಾಗಿ ಬೆಳೆದು ನಿಂತಿದ್ದ ಕಬ್ಬು ಹೊತ್ತಿ ಉರಿಯುವುದನ್ನು ಕಣ್ಣಾರೆ ಕಂಡ ರೈತರು ಬೆಂಕಿ ನಂದಿಸಲು ಹರಸಾಹಸ ಪಟ್ಟು ಪರದಾಡಿದರು. ಕಣ್ಣಮುಂದೆಯೇ ಸುಟ್ಟು ಹೋದ ಕಬ್ಬು ಬೆಳೆ ಕಂಡು ಅನ್ನದಾತರು ಮರುಗುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್
ಬೆಳೆದ ಕಬ್ಬು ಕಳೆದುಕೊಂಡು ನಷ್ಟಕ್ಕೆ ಸಿಲುಕಿರುವ ಅನ್ನದಾತರು ಪರಿಹಾರ ನೀಡುವಂತೆ ಅಂಗಲಾಚುತ್ತಿದ್ದಾರೆ. ಸರಿಯಾದ ಸಮಯಕ್ಕೆ ಕಬ್ಬು ಕಟಾವು ಮಾಡದೇ ಕೆಪಿಆರ್ ಸಕ್ಕರೆ ಫ್ಯಾಕ್ಟರಿ ಮೋಸ ಮಾಡಿದೆ. ಇದೀಗ ಆಕಸ್ಮಿಕ ಬೆಂಕಿ ಅನ್ನದಾತರ ಹೊಟ್ಟೆ ಮೇಲೆ ಬರೆ ಎಳೆದಿದೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.