ಬೆಂಗಳೂರು: ಒಬ್ಬ ಐಎಎಸ್ ಅಧಿಕಾರಿಯ ಮಗಳ ಮದುವೆ ಅಂದರೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಅಷ್ಟೇ ಅಲ್ಲದೆ ತಿಂಗಳುಗಳ ಕಾಲ ರಜೆ ಹಾಕಿ ವಿಶೇಷವಾಗಿ ಲಗ್ನಪತ್ರಿಕೆ ಮಾಡಿಸಿ ಅದನ್ನು ಕೊಡುತ್ತಾರೆ. ಆದರೆ ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ತಮ್ಮ ಮಗಳ ಮದುವೆಗೆ ಕೇವಲ ಒಂದೇ ಒಂದು ದಿನ ರಜೆ ತೆಗೆದುಕೊಂಡಿದ್ದಾರೆ.
ಇದೇ ಭಾನುವಾರ ವಿಜಯಭಾಸ್ಕರ್ ಅವರ ಮಗಳ ನಡೆಯಲಿದೆ. ವಿಜಯ ಭಾಸ್ಕರ್ ಅವರ ಮಗಳು ವೃತ್ತಿಯಲ್ಲಿ ವಕೀಲೆಯಾಗಿದ್ದು, ಉದ್ಯಮಿ ಗೌತಮ್ ಕುಮಾರ್ ಅವರನ್ನು ವರಿಸುತ್ತಿದ್ದಾರೆ. ಮದುವೆಯನ್ನು ಕೂಡ ಸರಳವಾಗಿ ಮಾಡಬೇಕೆಂದು ನಿರ್ಧಾರ ಮಾಡಿರುವ ವಿಜಯಭಾಸ್ಕರ್, ಮಲ್ಲೇಶ್ವರಂನಲ್ಲಿರುವ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಕಲ್ಯಾಣ ಮಂಟಪದ ದಿನದ ಬಾಡಿಗೆ 1,44,500 ರೂ. ಆಗಿದೆ. ಮದುವೆಗೂ ಯಾವುದೇ ಸರ್ಕಾರಿ ವಾಹನಗಳನ್ನು ಬಳಸದೆ ಖಾಸಗಿ ಟ್ರಾವೆಲ್ಸ್ ಮೂಲಕ ವಾಹನಗಳನ್ನು ಬಾಡಿಗೆಗೆ ತರಿಸುತ್ತಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಯೂ ಕೂಡ ಸರಳವಾಗಿ ಮಾಡಿಸಿದ್ದಾರೆ.
ಸಾಮಾನ್ಯ ಜನರಂತೆ ಮದುವೆಯ ವೆಡ್ಡಿಂಗ್ ಕಾರ್ಡ್ ಪ್ರಿಂಟ್ ಮಾಡಿಸಿದ್ದಾರೆ. ಕಾರ್ಡ್ ನಲ್ಲಿ ತಮ್ಮ ಹುದ್ದೆ ಹಾಗೂ ಅಧಿಕಾರವನ್ನು ಉಲ್ಲೇಖಿಸದೆ ಕೇವಲ ವಿಜಯಭಾಸ್ಕರ್ ಎಂದು ನಮೂದಿಸಿದ್ದಾರೆ. ತಮ್ಮ ಸಿಬ್ಬಂದಿಗೆ ಖುದ್ದು ಆಮಂತ್ರಣ ಕೊಟ್ಟು ಮದುವೆಗೆ ಬರುವಂತೆ ವಿನಂತಿಸಿದ್ದಾರೆ.